ಚುನಾವಣೆ ಸಮೀಪಿಸುತ್ತಿದ್ದಂತೆಯೇ, ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳೂ ತಮಗೆ ತೋಚಿದ ರೀತಿಯಲ್ಲಿ ಜನರನ್ನು ತಮ್ಮತ್ತ ಸೆಳೆಯಲು ಆರಂಭಿಸಿವೆ. ಬಹುತೇಕರು ಜನಾಕರ್ಷಣೆಗಾಗಿ ತಮ್ಮ ಪಕ್ಷದ ಹಿರಿಯ ನಾಯಕರ ರೋಡ್ ಶೋ ಮಾಡುತ್ತಾ ವಿವಿಧ ಹೆಸರಿನಲ್ಲಿ ರಥಯಾತ್ರೆಗಳನ್ನು ಮಾಡುತ್ತಾ, ಹಣ ಹೆಂಡಗಳನ್ನು ಎಗ್ಗಿಲ್ಲದೇ ಸದ್ದಿಲ್ಲದೇ ಹಂಚುತ್ತಾ ಸಭೆಯಲ್ಲಿ ಮೂರು ಮತ್ತು ಮತ್ತೊಂದು ಎನ್ನುವಂತೆ ಖಾಲೀ ಖುರ್ಚಿಗಳಿದ್ದರೂ ಸಹಸ್ರ ಸಹಸ್ರ ಜನರು ತಮ್ಮನ್ನು ಬೆಂಬಲಿಸುತ್ತಿರುವ ಕಾರಣ, ಈ ಬಾರಿ ನಮ್ಮದೇ ಸ್ವಂತ ಬಲದಿಂದ ಸರ್ಕಾರ ರಚಿಸಿ, ಕರ್ನಾಟಕವನ್ನು ದೇವಲೋಕ ಮಾಡಿ ಬಿಡುತ್ತೇವೆ ಎಂದು ಜನರನ್ನು ಇಂದ್ರ ಚಂದ್ರ ಎಂದು ಅಟ್ಟಕ್ಖೇರಿಸುತ್ತಿದ್ದಾರೆ.
ಇದುವರೆವಿಗೂ ಸ್ವಜಾತಿ ಬಾಂಧವರ ಬೆಂಬಲದಿಂದಾಗಿ ಕೇವಲ ಹಳೇ ಮೈಸೂರಿನ ಭಾಗದಲ್ಲಿ ಮಾತ್ರಾ ಪ್ರಾಭಲ್ಯ ಹೊಂದಿದ್ದು ಈಗ ಅದನ್ನೂ ಕಳೆದುಕೊಳ್ಳುವ ಭಯದಲ್ಲಿರುವ ಜನತಾದಳದ ಕುಮಾರಸ್ವಾಮಿ, ಒಂದು ಪಂಚಾಯ್ತಿ ಚುನಾವಣೆಯನ್ನೂ ಗೆಲ್ಲಲು ಸಾಮರ್ಥ್ಯವಿಲ್ಲದ, ಆರು ಕೊಟ್ಟರೇ ಅತ್ತೇ ಕಡೇ ಮೂರು ಕೊಟ್ಟರೆ ಸೊಸೇ ಕಡೆ ಎನ್ನುವಂತಹ ಮನಸ್ಥಿತಿಯ ಇಬ್ರಾಹಿಂ ಎಂಬ ಬೇತಾಳನನ್ನು ಬೆನ್ನ ಮೇಲೇ ಹಾಕಿ ಕೊಂಡು ಪಂಚರತ್ನ ಎಂಬ ರಥಯಾತ್ರೆ ನಡೆಸುತ್ತಾ, ತಮ್ಮ ಖರ್ಚಿನಲ್ಲೇ ತರ ತರಹದ ಹಾರಗಳನ್ನು ಹಾಕಿಸಿಕೊಂಡಿ ಲಿಮ್ಕಾ ದಾಖಲೆ ಮಾಡಿ ಈಗ ಅಮೋಘವಾಗಿ ಗಿನ್ನೆಸ್ ದಾಖಲೆ ಮಾಡುವತ್ತ ಧಾಪುಗಾಲು ಹಾಕುತ್ತಿರುವುದರ ಹೊರತಾಗಿ ಪಕ್ಷ ಮೂರದಿಂದ ಆರಕ್ಕೇ ಏರುವುದು ಬಿಡಿ ಇರುವ ಮೂರು ಮತ್ತೊಂದು ದಳವೇ ಉದುರಿ ಅದರಲ್ಲೂ ವಿಶೇಷವಾಗಿ ತನ್ನ ಸ್ವಂತ ಅಣ್ಣ, ಅತ್ತಿಗೆ, ಆವರ ಮಕ್ಕಳೇ ಇವರ ವಿರುದ್ಧ ಕತ್ತಿ ಮಸೆಯುತ್ತಿರುವುದು ನುಂಗಲಾರದ ತುಪ್ಪವಾಗಿದೆ.
ಸ್ವಪಕ್ಷೀಯ ಮತ್ತು ಸ್ವಂತ ಕುಟುಂಬದವರೇ ಕ್ಯಾರೇ ತಿಮ್ಮಯ್ಯಾ ಎಂದು ಕೇರೇ ಮಾಡದೇ ಹೋದಾಗ ಸಹಜವಾಗಿ ಬರುತ್ತಿರುವ ಕೋಪವನ್ನು ಯಾರ ಮೇಲೆ ತೀರಿಸಿಕೊಳ್ಳುವುದು ಎಂದಿದ್ದಾಗಲೇ, ಬಡವನ ಕೋಪ ದವಡೆಗೆ ಮೂಲ ಎನ್ನುವಂತೆ, ಹಿಂದೆ ಬಂದರೆ ಹಾಯದ ಮುಂದೆ ಬಂದರೆ ಒದೆಯದ ಬ್ರಾಹ್ಮಣರನ್ನು ಹಿಗ್ಗಾ ಮುಗ್ಗಾ ಹೋದ ಬಂದ ಕಡೆಯಲ್ಲೆಲ್ಲಾ ಬೈಯ್ದಾಡಿ ಜನರನ್ನು ದಿಕ್ಕು ತಪ್ಪುಸುವ ಮೂಲಕ ಸಮಯ ಸಾಧಕತೆ ಮೆರೆಯುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ.
ದೇವಸ್ಥಾನದ ಅರ್ಚಕರು ಆಸೆ ಬುರುಕರು ಎಂಬರ್ಥದಲ್ಲಿ ಇತ್ತೀಚೆಗೆ ಮಾತನಾಡಿದ್ದಾರೆ. ಅದೇ ರೀತಿ ಬ್ರಾಹ್ಮಣರು ಮುಖ್ಯಮಂತ್ರಿಯಾದರೆ ಈ ರಾಜ್ಯವೇ ಹಾಳಾಗುತ್ತದೆ ಎಂಬ ಭಾವನೆ ಮೂಡಿಸುವಂತೆ ಜನರನ್ನು ದಿಕ್ಕು ತಪ್ಪುಸುವ ಕಾಯಕದಲ್ಲಿ ನಿರತರಾಗಿದ್ದಾರೆ. ನಿಜ ಹೇಳಬೇಕೆಂದರೆ ಪುರದ ಹಿತವನ್ನು ಕಾಯುತ್ತಿದ್ದರು ಎಂಬ ಕಾರಣದಿಂದಲೇ ಬ್ರಾಹ್ಮಣರನ್ನು ಪುರೋಹಿತರು ಎಂದು ಕರೆಯುತ್ತಿದ್ದರು. ತಮ್ಮ ವಿದ್ಯೆ ಮತ್ತು ಬುದ್ಧಿಗಳಿಂದ ಊರ ಶ್ಯಾನುಭೋಗತನವನ್ನು ಮಡುತ್ತಿದ್ದದ್ದಲದೇ. ಬ್ರಾಹ್ಮಣರು ಉದ್ಯೋಗ ಸೃಷ್ಟಿಯ ಒಂದು ಕೇಂದ್ರ ಶಕ್ತಿಯಾಗಿದ್ದರು ಎಂದರು ತಪ್ಪಾಗದು.
ಒಂದೂರಿನಲ್ಲಿ ಒಂದು ದೇವಸ್ಥಾನವಿದ್ದು ಆ ದೇವಾಲಯದಲ್ಲಿ ಬ್ರಹ್ಮವಿದ್ಯೆಯನ್ನು ಕಲಿತ ಬ್ರಾಹ್ಮಣನೊಬ್ಬರು ತಮ್ಮ ವಿದ್ಯೆ, ಭಕ್ತಿಯಿಂದ ಪೂಜೆ ಮಾಡುವ ಮೂಲಕ ದೇವರು ಮತ್ತು ಭಕ್ತರ ನಡುವೆ ಸಂಪರ್ಕದ ಕೊಂಡಿಯಾಗಿರುತ್ತಿದ್ದರು. ಹೀಗೆ ಪುರೋಹಿತರು ಚೆನ್ನಾಗಿ ಪೂಜೆ ಮಾಡುತ್ತಿದ್ದರಿಂದ ದೇವಸ್ಥಾನಕ್ಕೂ ಒಂದು ರೀತಿಯ ಕೀರ್ತಿ ಮತ್ತು ಕಳೆ ಬಂದು ಜನರಿಂದ ಜನರಿಗೆ ಬಾಯಿ ಮಾತಿನಲ್ಲಿ ವಿಚಾರ ವಿನಿಮಯವಾಗಿ ಆ ದೇವಾಲಯಕ್ಕೆ ಬರುವ ಭಕ್ತಾದಿಗಳು ಹೆಚ್ಚಾಗುತ್ತಿದ್ದಂತೆಯೇ ಸಹಜವಾಗಿ ದೇವಸ್ಥಾನ ಕೇವಲ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಉಳಿಯದೇ ಅದೊಂದು ವ್ಯಾಪಾರೀ ಕೇಂದ್ರವಾಗಿ ಮಾರ್ಪಾಟಾಗುತ್ತದೆ.
ದೇವಾಲಯದಲ್ಲಿ ದೇವರಿಗೆ ಅರ್ಪಿಸಲು ಹೂವು ಹಣ್ಣು ಕರ್ಪೂರ ಊದುಕಡ್ಡಿ ಮಾರುವ ಅಂಗಡಿ ಆರಂಭವಾಗುತ್ತದೆ. ದೇವರ ದೀಪಕ್ಕೆ ಬೇಕಾಗುವ ಬತ್ತಿ ದೇವರ ಅಲಂಕಾರಕ್ಕೆ ಬೇಕಾಗುವ ಗಜ್ಜೆ ವಸ್ತ್ರಗಳನ್ನು ಮಾಡಲು ಹತ್ತಿ, ದೇವರ ದೀಪ ಹಚ್ಚಿಸಲು ಗಾಣದ ಹರಳೆಣ್ಣೆ, ಹುಚ್ಚೆಳ್ಳೆಣ್ಣೆ, ಎಳ್ಳೆಣ್ಣೆಯ ವ್ಯಾಪಾರವಾಗುತ್ತದೆ. ದೇವರಿಗೆ ಮುಡಿ ಅರ್ಪಿಸುವವರ ಮೂಲಕ ಸವಿತಾ ಜನಾಂಗದವರಿಗೆ ನಿತ್ಯವೂ ಕೆಲಸ ಸಿಕ್ಕರೇ, ದೇವಾಲಯಕ್ಕೆ ಬರುವವರ ಹಸಿವನ್ನು ನಿವಾರಿಸಲು ಸಣ್ಣ ಪುಟ್ಟ ಹೋಟೆಲ್ ಅರಂಭವಾಗಿ ಅಲ್ಲಿ ಅಡುಗೆ ಮಾಡುವವರಿಗೆ, ಸರ್ವರ್ ಗಳಿಗೆ, ಕಡೆಗೆ ಮುಸುರೆ ತಿಕ್ಕುವವರಿಗೂ ಕೆಲಸ ಸಿಕ್ಕಂತಾಗುತ್ತದೆ. ಇನ್ನು ದೇವಾಲಯಕ್ಕೆ ಬರುವ ಚಿಕ್ಕಮಕ್ಕಳಿಗೆಂದೇ ಬೆಂಡು ಬತ್ತಾಸು. ಕಾರ ಶೇವೆ, ಕಡ್ಲೇಪುರಿಯ ಜೊತೆಗೆ ಬಣ್ಣ ಬಣ್ಣದ ಆಟಿಕೆಗಳನ್ನು ಮಾರಾಟ ಮಾಡುವವರೂ ಆರಂಭವಾಗುತ್ತದೆ. ದೇವಾಲಯದ ಮುಂದೆ ಎಲ್ಲೆಂದರಲ್ಲಿ ಚಪ್ಪಲಿ ಬಿಟ್ಟು ನೈರ್ಮಲ್ಯವನ್ನು ಹಾಳು ಮಾಡುವ ಬದಲು ಚಪ್ಪಲಿ ಬಿಡುವುದಕ್ಕೆಂದೇ ಒಂದು ಸೂಕ್ತವಾದ ಜಾಗವನ್ನು ಮೀಸಲಿಡಿಸಿ ಅವುಗಳನ್ನು ಕಾಯಲೆಂದೇ ಇರುವವರಿಗೂ ನಾಲ್ಕಾರು ಕಾಸು ದೊರೆಯುತ್ತದೆ. ದೇವಾಲಯದ ಸುತ್ತಮುತ್ತಲೂ ಕಸ ಗುಡಿಸುವವರಿಗೂ ಕೆಲೆಸ ಸಿಗುತ್ತದೆ. ಹೀಗೆ ಒಬ್ಬ ಬ್ರಾಹ್ಮಣ ನಿತ್ಯವೂ ಶ್ರದ್ದೆಯಿಂದ ಪೂಜೆ ಮಾಡುವ ಮೂಲಕ ಆ ಕ್ಷೇತ್ರಕ್ಕೆ ದೈವೀ ಶಕ್ತಿಯನ್ನು ತಂದುಕೊಡುವುದಲ್ಲದೇ ಪರೋಕ್ಷವಾಗಿ ಹತ್ತಾರು ಕುಟುಂಬಗಳಿಗೆ ಆಶ್ರಯದಾತರಾಗುತ್ತಾರೆ.
ಇನ್ನು ಈ ದೇಶದ ಸರಿಯಾದ ಇತಿಹಾಸವನ್ನು ಓದಿ ಕೊಂಡಿರುವವರು ಯಾರೂ ಸಹಾ ಬ್ರಾಹ್ಮಣರ ಅವಹೇಳನ ಮಾಡಲು ಹೋಗುವುದಿಲ್ಲ. ಎಲ್ಲೆಲ್ಲೆ ಆಶಾಂತತೆ ಪಕ್ಷುಬ್ಧತೆ ಮತ್ತು ರಾಜಕೀಯ ವಿಪ್ಲಪವಗಳು ನಡೆದಿವೆಯೋ ಅಲ್ಲೆಲ್ಲಾ ಬ್ರಾಹ್ಮಣರು ಅಗ್ರೇಸರರಾಗಿ ನಿಂತು ಜನರನ್ನು ಒಗ್ಗೂಡಿಸಿ ಸಮರ್ಥವಾದ ಸಾಮ್ರಾಜ್ಯವನ್ನು ಕಟ್ಟಿ ಅದನ್ನು ಸಮರ್ಥರ ಕೈಗೊಪ್ಪಿಸಿದ್ದಾರೆಯೇ ಹೊರತು ಎಂದಿಗೂ ಯಾರ ಮೇಲೇ ಏರಿ ಹೋಗಿಲ್ಲಾ. ಇಷ್ಟೆಲ್ಲಾ ಗೊತ್ತಿದ್ದರೂ ಸಹಾ ತಮ್ಮ ರಾಜಕೀಯ ತೆವಲು ಮತ್ತು ಕೆಲ ಜಾತಿ ಮತ್ತು ಧರ್ಮದ ತುಷ್ಟೀಕರಣಕ್ಕಾಗಿ ವಿನಾಕಾರಣ ಬ್ರಾಹ್ಮಣರನ್ನು ಅವಹೇಳನ ಮಾಡುವುದು ಅಂತಹ ಮಹಾನ್ ನಾಯಕರಿಗೆ ಶೋಭೆ ತಾರದು.
ಇನ್ನು ದಿನೇ ದಿನೇ ಜಟಿಲವಾಗುತ್ತಿರುವ ಕುಟುಂಬ ಕಲಹದ ಒತ್ತಡದಲ್ಲಿ ಕುಮಾರಸ್ವಾಮಿಯವರ ಮಾನಸಿಕ ಆರೋಗ್ಯ ದಿನೇ ದಿನೇ ಕುಂಠಿತವಾಗುತ್ತಾ ಇದ್ದು, ಈ ಹಿಂದೆ ಅವರೇ ಮಾತನಾಡಿದ್ದು ಈಗ ಅವರಿಗೆ ನೆನಪಿನಲ್ಲೇ ಉಳಿಯದೇ ದಿನಕ್ಕೊಂದು ದಿಕ್ಕು ತಪ್ಪಿಸುವ ಮಾತುಗಳನ್ನು ಆಡುತ್ತಿರುವುದಕ್ಕೆ ಸೂಕ್ತ ಉದಾಹಣೆ ಎಂದರೆ, ಬೆಂಗಳೂರಿನಲ್ಲಿ 13.02.2023 ರಿಂದ ಆರಂಭವಾಗಿರುವ ಏರ್ ಶೋನಲ್ಲಿ ಭಾಗವಹಿಸಲು ಮೋದಿಯವರು ಬಂದು ಹೋಗಿದ್ದು ಅವರ ಮೈ ಮನಗಳೆಲ್ಲವೂ ಉರಿದು ಹೋಗಿ, ಅಪರೂಪಕ್ಕೆ ವಿಧಾನ ಮಂಡಲದ ಅಧಿವೇಶನಕ್ಕೆ ಹಾಜರಾಗಿ, ಏರ್ಶೋ ದಿಂದ ಬಡತನ ನಿರ್ಮೂಲ ಆಗುತ್ತದೆಯೇ? ಎಂಬ ಅಪ್ರಸ್ತುತವಾದ ಬಾಲಿಶವಾದ ಪ್ರಶ್ನೆಯನ್ನು ಎತ್ತುವ ಮೂಲಕ ಅಳುದುಳಿದ ಮಾನವನ್ನೂ ಕಳೆದುಕೊಳ್ಳುತ್ತಿದ್ದಾರೆ.
ಇದೇ ಕುಮಾರ ಸ್ವಾಮಿಯವರೇ August 12, 2018ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಂಧರ್ಭದಲ್ಲಿ, ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರ್ ಶೋವನ್ನು ಉತ್ತರ ಪ್ರದೇಶದ ಲಕ್ನೋವಿಗೆ ಸ್ಥಳಾಂತರ ಮಾಡಲು ಕೇಂದ್ರ ಸರ್ಕಾರ ಯೋಚನೆ ಮಾಡಿದಾಗ, ಏರ್ ಶೋ ಬೆಂಗಳೂರಿನಲ್ಲೇ ಆಗಬೇಕೆಂದು ಅದರ ವರ್ಣರಂಜಿತ ಇತಿಹಾಸವನ್ನು ಉಲ್ಲೇಖಿಸಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದವರು, ಈಗ ಅದೇ ಮೋದಿಯವರು ಬೆಂಗಳೂರಿನಲ್ಲಿ ಆರಂಭವಾದ ಏರ್ ಶೋ ಉಧ್ಘಾಟನೆ ಮಾಡುವ ನೆಪದಲ್ಲಿ, ಈ ಚುನಾವಣಾ ಸಮಯದಲ್ಲಿ ಕರ್ನಾಟಕಕ್ಕೆ ಬಂದು ತಮ್ಮ ಪಕ್ಷದ ಅಳುದುಳಿದ ಸ್ಥಾನಗಳಿಗೂ ಸಂಚಕಾರ ತರುತ್ತಿದ್ದಾರೆ ಎಂಬ ಭಯದಿಂದ ಈಗ ಏರ್ ಶೋ ಇಂದ ಹೊಟ್ಟೆ ತುಂಬುತ್ತಾ? ಎಂದು ಕೇಳುತ್ತಿರುವ ಮೂಲಕ ಇಂತಹ ಸಾಮಾನ್ಯ ಜ್ಞಾನವೂ ಇಲ್ಲದ ಮನುಷ್ಯನನ್ನು ಈ ರಾಜ್ಯಕ್ಕೆ ಮತ್ತೆ ಯಾವ ಪುರುಷಾರ್ಥಕ್ಕಾಗಿ ಮುಖ್ಯಮಂತ್ರಿಯನ್ನಾಗಿ ಮಾಡಬೇಕು? ಎಂದು ಜನರು ಆಡಿಕೊಳ್ಳುವಂತಾಗಿದೆ.
ದೇಶದ ಭದ್ರತೆ, ಆರ್ಥಿಕ ಸ್ವಾವಲಂಬನೆ, ತಂತ್ರಜ್ಞಾನ ಅಭಿವೃದ್ಧಿ ಮುಂತಾದ ವಿಷಯ ಗಳ ಬಗ್ಗೆ ಚಿಂತನೆ ಇಲ್ಲದವರು ಮಾತ್ರಾ, ಹೀಗೆ ಬಡತನ ಎಂಬ ವಿಷಯ ಮುಂದಿಟ್ಟುಕೊಂಡು ರಾಜಕೀಯ ಮಾಡಿ, ಮುಗ್ದ ಜನರಿಗೆ ಮಂಕುಬೂದಿ ಎರಚುತ್ತಾ, ಅವರ ಹೆಸರಿನಲ್ಲಿ ಹತ್ತಾರು ತಲೆಮಾರುಗಳಿಗೆ ಆಗುವಷ್ಟು ಅಕ್ರಮ ಆಸ್ತಿಗಳಿಸುತ್ತಾ ಹೋಗಿರುವುದನ್ನು ಈ ದೇಶದಲ್ಲಿ ಸಾಕಷ್ಟು ನೋಡಿದ್ದು, ಆ ಪಟ್ಟಿಯಲ್ಲಿ ಕುಮಾರ ಸ್ವಾಮಿಯವರ ಕುಟುಂಬದ ಹೆಸರೂ ಇರುವುದು ವಿಪರ್ಯಾಸ. ಎಪ್ಪತ್ತರ ದಶಕದಲ್ಲಿಯೇ ಗರೀಬೀ ಹಟಾವೋ ಎಂದು ಎಪ್ಪತ್ತು ವರ್ಷ ಆಳಿದ ಪಕ್ಷದವರು, ಇಂದಿಗೂ ಅದೇ ಬಡತನ ನಿರ್ಮೂಲನದ ಹೇಳಿಕೆಯನ್ನೇ ಕೊಡುವಂತೆ, ತಾನು ಕಳ್ಳ ಪರರ ನಂಬ ಎನ್ನುವಂತಹ ಕುಮಾರ ಸ್ವಾಮಿ ರಾಜ್ಯ ಮತ್ತು ರಾಷ್ಟ್ರದ ಕುರಿತಾಗಿ ಯಾವುದೇ ದೂರಗಾಮಿ ಯೋಜನೆ ಇಲ್ಲದೇ, ಕೇವಲ ಪ್ರಾದೇಶಿಕ ಅಸ್ಮಿತೆ ಮತ್ತು ಜಾತಿಯನ್ನೇ ಮುಂದಿಟ್ಟು ಕೊಂಡು ಅನುಕೂಲ ಸಿಂಧು ರಾಜಕಾರಣಿ ಆಗಿ ಸಾಂಧರ್ಭಿಕ ಶಿಶುವಿನ ರೂಪದಲ್ಲಿ ಮತ್ತೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಏರ್ ಶೋ ಎಂದರೆ, ಎಲ್ಲಿದ್ಯಪ್ಪಾ ನಿಖಿಲ್? ಖ್ಯಾತಿಯ ತಮ್ಮ ಮಗ ನಿಖಿಲ್ ಕುಮಾರ ಸ್ವಾಮಿ ಅಭಿನಯಿಸಿದ ಸಿನಿಮಾಗಳು ಎಂದು ಕುಮಾರ ಸ್ವಾಮಿ ಭಾವಿಸಿರುವಂತಿದೆ. ತಾವೇ ಸ್ವತಃ ಬಿಟ್ಟಿ ಟಿಕೆಟ್ ಕೊಟ್ಟರೂ ಅವರ ಮಗನ ಸಿನಿಮಾ ನೋಡಲು ಜನಾ ಬಾರದೇ ಹೊಗಬಹುದು ಆದರೆ ಅದೇ ಈ ಏರ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಲು ನೂರಾರು ರಾಷ್ಟ್ರದ ಸಾವಿರಾರು ವಿದೇಶಿ ಕಂಪನಿಗಳಲ್ಲದೇ, ಆ ದೇಶದ ಸೈನ್ಯಾಧಿಕಾರಿಗಳು ಇಲ್ಲಿ ಪ್ರದರ್ಶನ ಗೊಳ್ಳುವ ಇಲ್ಲವೇ ನಮ್ಮ ದೇಶದಲ್ಲಿ ಉತ್ಪಾದನೆ ಗೊಳ್ಳುತ್ತಿರುವ ವಿಮಾನಗಳನ್ನು ನೋಡಿ ಅವರಿಗೆ ಇಷ್ಟವಾದಲ್ಲಿ ನಮ್ಮೊಂದಿಗೆ ವ್ಯವಹಾರವನ್ನು ಮಾಡುವ ಸಲುವಾಗಿ ಬಂದಿರುತ್ತಾರೆ. ಹೀಗೆ ವಿಮಾನ ಮತ್ತು ವಿಮಾನದ ಉತ್ಪನ್ನಗಳ ಮಾರಾಟದಿಂದ ದೇಶಕ್ಕೆ ಹೇರಳವಾದ ವಿದೇಶ ವಿನಿಮಯ ಬರುತ್ತದೆ. ಕಡೇ ಪಕ್ಷ ಅವರು ಯಾವುದೇ ವ್ಯಾಪಾರ ಮಾಡದೇ ಹೋದರೂ, ಕನಿಷ್ಟ ಪಕ್ಷ ಪ್ರವಾಸಿಗರಾಗಿ ಎರಡು ಮೂರು ವಾರಗಳ ಕಾಲ ನಮ್ಮ ದೇಶದಲ್ಲಿ ಸುತ್ತುವ ಮೂಲಕ ಇಲ್ಲಿನ ಪ್ರವಾಸೀ ತಾಣಗಳ ಹೋಟೆಲ್, ಟ್ರಾಸ್ನ್ಪೋರ್ಟ್ , ಬಟ್ಟೆ, ಆಟಿಕೆಗಳ ವ್ಯಾಪಾರಿಗಳಿಗಾದರೂ ವ್ಯಾಪರವಾಗುತ್ತದೆ. ವಿದೇಶಿ ವಿನಿಮಯದ ಕೊರತೆಯಿಂದಾಗಿಯೇ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ ಮತ್ತು ಪಾಕಿಸ್ತಾನ್ ಹೇಗೆ ದಿವಾಳಿ ಅಂಚಿಗೆ ತಲುಪಿವೆ ಎಂಬ ಸಾಮಾನ್ಯ ಪರಿಜ್ಞಾನವೂ ಇಲ್ಲದೇ ಮತ್ತದೇ ಸಾಲ ಮನ್ನ, ಬಿಟ್ಟಿ ಭಾಗ್ಯಗಳನ್ನು ನೀಡುವ ಮೂಲಕ ಜನರಿಂದ ಚಪ್ಪಾಳೆ ತಟ್ಟಿಸಿಕೊಂಡು ಅದರಲ್ಲೂ ಕಾಸು ಮಾಡಿಕೊಂಡು ಈ ದೇಶವನ್ನು ದಿವಾಳಿ ತನಕ್ಕೆ ದೂಡುವ ಹುನ್ನಾರ ಮಾಡಲು ಮುಂದಾಗಿರುವ ಕುಮಾರಸ್ವಾಮಿಯವರ ಈ ಸೋಗಲಾಡಿತನ ನಿಜಕ್ಕೂ ಅಕ್ಷಮ್ಯವೇ ಸರಿ.
ಆಹಾರ ಸರಪಳಿಯಂತೆ, ಈ ಮೇಲೆ ತಿಳಿಸಿದ ದೇವಾಲಯದ ಆರ್ಥಿಕತೆಯ ಸರಪಳಿಯನ್ನು ಅರಿತವರು, ಈ ರೀತಿ, ಏರ್ ಶೋ ದಿಂದ ಬಡತನ ನಿವಾರಣೆ ಆಗುತ್ತದೆಯೇ? ಎಂಬ ಮಾತನ್ನು ಆಡುತ್ತಿರಲಿಲ್ಲ. ವಯಸ್ಸು ಆರೋಗ್ಯದ ನೆಪ ಹೇಳಿಕೊಂಡು ಇದೇ ನನ್ನ ಕೊನೇ ಚುನಾವಣೆ ಎಂದು ಮೊಸಳೇ ಕಣ್ಣೀರು ಸುರಿಸುತ್ತಾ, ಮಣ್ಣಿನ ಮಕ್ಕಳು ಎಂದು ಕೇವಲ ತಮ್ಮ ಕುಟುಂಬ ವರ್ಗಕ್ಕೆ ಮಾತ್ರವೇ ಅಧಿಕಾರವನ್ನು ಮೀಸಲಾಗಿರಿಸಿಕೊಂಡು ಸಾಮಾನ್ಯ ಜನರಿಗೆ, ಅದರಲ್ಲೂ ರೈತರರಿಗೆ ಮಂಕು ಬೂದಿ ಎರಚುತ್ತಾ, ಇಷ್ಟು ವರ್ಷ ಅಧಿಕಾರದಲ್ಲಿ ಇದ್ದ ಇವರ ಕುಟುಂಬ ಎಷ್ಟು ಉದ್ದಾರ ಆಗಿದೆ? ಇವರ ಕುಟುಂಬ ನಮ್ಮ ರಾಜ್ಯ ಮತ್ತು ದೇಶವನ್ನು ಎಷ್ಟು ಉದ್ದಾರ ಮಾಡಿದ್ದಾರೆ? ಎಂಬ ಕಠು ಸತ್ಯ ಈಗ ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಹಾಗಾಗಿಯೇ ಇವರು ಆ ಜಾತಿಯವರು ಮುಖ್ಯಮಂತ್ರಿ ಆಗ್ತಾರೆ, ಈ ಜಾತಿಗೆ ಆ ಪಕ್ಷದಲ್ಲಿ ಪ್ರಾದಾನ್ಯತೆ ಇಲ್ಲಾ ಅಂತ ಹೇಳಿಕೊಂಡು ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಾ ತಮ್ಮ ಬೇಳೆ ಬೇಯಿಸಿಕೊಂಡು ಓಡಾಡುತ್ತಿರುವುದು ಸ್ಪಷ್ಟವಾಗಿ ಜನರ ಅರಿವಿಗೆ ಬರುತ್ತಿದೆ.
ಪ್ರಸಕ್ತ ವರ್ಷದ ಏರ್ ಶೋ ಗೆ 98 ದೇಶಗಳಿಂದ ಭಾಗವಹಿಸತ್ತಿದ್ದು, ಪ್ರಪಂಚದ ಪ್ರತಿಷ್ಠಿತ 26 ಕಂಪೆನಿಯ CEO ಗಳು ಸಹಾ ಇದರಲ್ಲಿ ಬಾಗವಹಿಸುತ್ತಿದ್ದಾರೆ. ಈಗಾಗಲೇ ಬಹಿರಂಗವಾಗಿರುವಂತೆ ಸರಿ ಸುಮಾರು 251 ಕ್ಕೂ ಹೆಚ್ಚು MOU ನಡೆಯಲಿದ್ದು ಅದರಲ್ಲಿ ಸರಿಸುಮಾರು 75,000 ಕೋಟಿಗೂ ಅಧಿಕ ಮೊತ್ತದ ಹೂಡಿಕೆ ಮತ್ತು ವಹಿವಾಟಿಗೆ ವೇದಿಕೆಯಾಗಲಿದೆ. ಈ ಏರ್ ಶೋ ನಿಸ್ಸಂದೇಹವಾಗಿ ಸ್ವದೇಶಿ ನಿರ್ಮಿತ ವೈಮಾನಿಕ ಯಂತ್ರಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯ ವೇದಿಕೆಯಾಗಲಿದೆ. ಈ ಪರಿಯ ವಿದೇಶೀ ಬಂಡವಾಳ ಭಾರತಕ್ಕೆ ಬರುವುದರಿಂದ ಸಾವಿರಾರು ಕುಟುಂಬಕ್ಕೆ ಪ್ರತ್ಯಕ್ಷವಾಗಿ ಮತ್ತು ಲಕ್ಷಾಂತರ ಜನರಿಗೆ ಪರೋಕ್ಷವಾಗಿ ಸಹಕಾರಿಯಾಗುತ್ತದೆ ಎಂಬ ಪರಿಜ್ಞಾನವೂ ಇಲ್ಲದೇ, ಕೇವಲ ಚುನಾವಣಾ ಸಮಯದಲ್ಲಿ ಜನರ ದಿಕ್ಕನ್ನು ತಪ್ಪಿಸುವ ಈ ಸಮಯ ಸಾಧಕತನ ನಿಜಕ್ಕೂ ಅಸಹ್ಯ ಹುಟ್ಟಿಸುತ್ತದೆ.
ಕುಮಾರಸ್ವಾಮಿ ಮತ್ತು ಅವರ ಕುಟುಂಬಕ್ಕೆ ಬಡತನ ನಿರ್ಮೂಲನ ಮತ್ತು ದೇಶಕ್ಕೆ ಒಳಿತು ಮಾಡುವ ಮನಸ್ಸಿದ್ದಲ್ಲಿ ಖಂಡಿತವಾಗಿಯೂ, ಬಹಿರಂಗವಾಗಿ, ಸ್ತ್ರೀ ಶಕ್ತಿ ಮತ್ತು ಸಹಕಾರ ಸಂಘಗಳಲ್ಲಿ ಸಾಲ ಮಾಡಿ, ನಮ್ಮ ಸರ್ಕಾರ ಬಂದ 24 ಗಂಟೆಯಲ್ಲೇ ಆ ಎಲ್ಲಾ ಸಾಲಗಳನ್ನು ಮನ್ನಾ ಮಾಡುತ್ತೇವೆ ಎಂದು ಘೋಷಣೆ ಮಾಡುತ್ತಿರಲಿಲ್ಲ. ದೇಶದ ಬಡತನ ನಿರ್ಮೂಲನೆ ಮಾಡುವ ಉದ್ದೇಶವಿದ್ದಿದರೆ, ಅಧಿಕಾರ ಸಿಕ್ಕಾಗ ದುಬಾರಿ ತಾಜ್ ವೆಸ್ಟ್ ಎಂಡ್ ಹೋಟೆಲ್ಲಿನಲ್ಲಿ ಕುಳಿತುಕೊಂಡು ಅಧಿಕಾರ ಚಲಾಯಿಸುತ್ತಿರಲಿಲ್ಲ. ಗ್ರಾಮ ವಾಸ್ತವ್ಯ ಎಂಬ ಒಂದು ದಿನದ ನಾಟಕಕ್ಕಾಗಿ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿಸುತ್ತಿರಲಿಲ್ಲ. ಜನರ ಕಷ್ಟಗಳನ್ನು ನಿವಾರಣೆ ಮಾಡುವ ಉದ್ದೇಶವಿದ್ದಲ್ಲಿ, ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ತಮ್ಮ ಮಗನ ಸಿನಿಮಾಗಳು ಮತ್ತು ಆತನನ್ನು ಮಂಡ್ಯಾ ಲೋಕಸಭಾ ಚುನಾವಣೆಗೆ ನಿಲ್ಲಿಸುತ್ತಿರಲಿಲ್ಲ. ಕುಮಾರ ಸ್ವಾಮಿಯವರ ವಯಕ್ತಿಕ ಜೀವನ ಮತ್ತು ಆವರ ಕುಟುಂಬದ ಸಮಸ್ಯೆಗಳಿಂದಾಗಿ ಅವರ ತಟ್ಟೆಯಲ್ಲೇ ದೊಡ್ಡ ಹೆಗ್ಗಣ ಸತ್ತು ಬಿದ್ದು ನಾತ ಬೀರುತ್ತಿರುವಾಗ ಅದನ್ನು ಪರಿಹರಿಸಿಕೊಳ್ಳದೇ, ಸತ್ಯ ಹರಿಶ್ಚಂದ್ರನ ವಂಶದ ರೀತಿಯಲ್ಲಿ ಮತ್ತೊಬ್ಬರ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ಎತ್ತಿ ತೋರಿಸುವುದು ಮೂರ್ಖತನದ ಪರಮಾವಧಿ. ಅವರದ್ದೇ ಅಕ್ವರನ ಆಳ್ವಿಕೆಯ ಕಾಲದಲ್ಲಿ ಮೂರ್ಖರನ್ನು ಕಂಡರೆ ಏನು ಮಾಡಬೇಕು? ಎಂದು ಕೇಳಿದಾಗ ಅಕ್ಬರ ಆಸ್ಥಾನದ ಮಂತ್ರಿ, ವಿಕಟಕವಿ ಮಹೇಶ ಶರ್ಮ (ಬೀರಬಲ್) ಹೇಳಿದಂತೆ ಮೂರ್ಖರೊಂದಿಗೆ ವಿತಂಡ ಮಾಡುವ ಬದಲು ಮೂರ್ಖರಿಂದ ದೂರ ಇರಬೇಕು ಎನ್ನುವಂತೆ ಜನರೂ ಸಹಾ ಮುಂಬರುವ ಚುನಾವಣೆಯಲ್ಲಿ ಇವರನ್ನು ಮತ್ತು ಇವರ ಪಕ್ಷವನ್ನು ಎಲ್ಲಿ ಇಡಬೇಕೆಂದು ಈಗಾಗಲೇ ತೀರ್ಮಾನಿಸಿದ್ದಾರೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ