ನಾವು ಚಿಕ್ಕವರಿದ್ದಾಗ, ಶಾಲೆಯಿಂದ ಇಲ್ಲವೇ ಆಟವಾಡಿ ಬಂದ ಮರಳಿ ಬಂದ ನಂತರ, ಅಮ್ಮಾ ಅವನು ಹೊಡೆದ, ಅವನು ಬೈದಾ ಎಂದು ಮತ್ತೊಬ್ಬರ ಮೇಲೆ ಚಾಡಿ ಹೇಳಿದ ತಕ್ಷಣವೇ ನಮ್ಮ ಥಟ್ ಅಂತಾ ಕೇಳುತ್ತಿದ್ದದ್ದೇ, ಅವನು ಬೈಯ್ಯುವ/ಹೊಡೆಯುವ ಮೊದಲು ನೀನೇನು ಮಾಡಿದೆ ಅದುನ್ನು ಹೇಳು ಎಂದು ಮೊದಲು ಸವಿಸ್ತಾರವಾಗಿ ವಿಚಾರಿಸಿ, ನನ್ನದೇ ತಪ್ಪಿದ್ದಲ್ಲಿ ಅವನ ಬಳಿಗೆ ಹೋಗಿ ಸಿಹಿ ತಿಂಡಿ/ಚಾಕ್ಲೇಟ್/ಪೆಪ್ಪರ್ಮೆಂಟ್/ಬಿಸ್ಕತ್ತನ್ನು ಕೊಟ್ಟು ಕ್ಷಮೆ ಯಾಚಿಸುವಂತೆ ಹೇಳುತ್ತಿದ್ದದ್ದಲ್ಲದೇ, ಮತ್ತೆಂದೂ ಈ ರೀತಿಯ ತಪ್ಪು ಮಾಡ ಬೇಡ ಎಂಬ ಎಚ್ಚರಿಕೆಯ ಕಿವಿಮಾತನ್ನು ಹೇಳುತ್ತಿದ್ದರು.
ಇಷ್ಟೆಲ್ಲಾ ಪೀಠಿಕೆ ಹೇಳಿದಾಗ, ಎಲ್ಲರಿಗೂ ನಾನು ಯಾವ ವಿಷಯದ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದೇನೆ ಎಂಬುದು ಸುಲಭವಾಗಿ ಅರ್ಥವಾಗಿರುತ್ತದೆ. 2019ರಲ್ಲಿ ಕೋಲಾರದಲ್ಲಿ ತಮ್ಮ ಪಕ್ಷದ ಪರವಾಗಿ ಚುನಾವಣಾ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಮುಂದಿನ ಸಾಲಿನಲ್ಲಿ ಕುಳಿತಿದ್ದ ತಮ್ಮ ವಂಧಿಮಾಗಧರ ಮೆಚ್ಚುಗೆ ಗಳಿಸುವ ಸಲುವಾಗಿ ಜನರು ಕಶ್ಟ ಪಟ್ಟು ಸಂಗ್ರಹಿಸಿ ಬ್ಯಾಂಕಿನಲ್ಲಿ ಇಟ್ಟಿದ್ದ ಹಣವನ್ನು ನೀರವ್ ಮೋದಿ, ಮತ್ತು ಲಲಿತ್ ಮೋದಿಯವರು ತೆಗೆದುಕೊಂಡು ವಿದೇಶಕ್ಕೆ ಪರಾರಿಯಾಗಿ ಹೋಗುತ್ತಾರೆ ಎಂದು ಹೇಳುತ್ತಿದ್ದಾಗ, ಇದ್ದಕ್ಕಿಂದ್ದಂತೆಯೇ, ಅರೇ, ಈ ಕಳ್ಳರ ಹೆಸರುಗಳೆಲ್ಲಾ ಮೋದಿಯೇ ಏಕಾಗಿರುತ್ತದೇ? ನೋಡೀ ಲಲಿತ್ ಮೋದಿ, ನೀರವ್ ಮೋದಿ, ನರೇಂದ್ರ ಮೋದಿ ಎಂದು ಹೇಳಿದ್ದರೆ ತೊಂದರೆ ಆಗುತ್ತಿರಲಿಲ್ಲವೇನೋ? ಅದರೆ ಈ ಮೂರು ಮೋದಿಗಳ ಹೆಸರಿಗೆ ಎದುರಿಗಿದ್ದವರು ಸಿಳ್ಳೆ ಚಪ್ಪಾಳೆ ಹೊಡೆದದ್ದರಿಂದ ಪ್ರೇರಿತರಾಗಿ ಮೋದಿ ಎಂಬುವರೆಲ್ಲಾ ಕಳ್ಳರೇ.. ಇನ್ನಷ್ಟು ದಿನಗಳು ಕಾದು ನೋಡಿ ಮತ್ತಷ್ಟು ಮೋದಿಗಳು ಈ ಸಾಲಿಗೆ ಸೇರಿಕೊಳ್ಳುತ್ತಾರೆ ಎಂದು ಮಾತಿನ ಭರದಲ್ಲಿ ಹೇಳಿದ್ದೇ ಈಗ ಮುಳುವಾಗಿದೆ.
ಅಂದು ರಾಹುಲ್ ಮಾಡಿದ ಈ ಟೀಕೆಯ ಭಾಷಣದ ಕುರಿತಾಗಿ ಸ್ಥಳೀಯವಾಗಿ ಕೆಲವು ಬಿಜೆಪಿ ನಾಯಕರು ಪ್ರತಿಕ್ರಿಯಿಸಿದರೆ, ನರೇಂದ್ರ ಮೋದಿ, ನೀರವ್, ಲಲತ್ ಈ ಟೀಕೆಗೆ ಸೊಪ್ಪು ಹಾಗಿರಲಿಲ್ಲ. ಆದರೆ, ರಾಹುಲ್ ಮಾಡಿದ ಆ ಭಾಷಣದ ಅ ಕ್ಷಣದ ದಾಖಲೆಗಳನ್ನು ಸಂಗ್ರಹಿಸಿದ ಮುಳುಬಾಗಿಲಿನ ರಘುನಾಥ್ ಎಂಬ ಹಿರಿಯ ಬಿಜೆಪಿ ಕಾರ್ಯಕರ್ತರು ರಾಹುಲ್ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳವಂತೆ ರಾಜ್ಯ ಬಿಜೆಪಿ ನಾಯಕರ ಮುಂದಿಟ್ಟಾಗ, ಹೊಂದಾಣಿಕೆ ರಾಜಕಾರಣಕ್ಕೆ ಒಗ್ಗಿ ಹೋಗಿರುವ ಪಕ್ಷದ ನಾಯಕರು ಇದಕ್ಕೆ ಸ್ಪಂದಿಸದೇ ಹೋದಾಗ, ಛಲ ಬಿಡದ ತ್ರಿವಿಕ್ರಮನಂತೆ, ಗುಜರಾತಿನ ಮಾಜಿ ಮಂತ್ರಿ ಮತ್ತು ಹಾಲಿ ಶಾಸಕರಾದ ಪೂರ್ಣೇಶ್ ಮೋದಿಯವರಿಗೆ ಈ ವಿಷಯ ತಿಳಿಸಿ ಅವರ ಮೂಲಕ ಸ್ಥಳೀಯ ಸೂರತ್ ಕೋರ್ಟಲ್ಲಿ ರಾಹುಲ್ ವಿರುದ್ಧ ಮಾನ ನಷ್ಟ ಮೊಕ್ಕದ್ದಮ್ಮೆಯನ್ನು ದಾಖಲು ಮಾಡಿಸಿದ್ದಲ್ಲದೇ ನಂತರ, ಕರ್ನಾಟಕದ ಇತರೇ ಪೋಲೀಸ್ ಅಧಿಕಾರಿಗಳ ಜೊತೆ ರಘುನಾತ್ ಆವರೇ ನ್ಯಾಯಾಲಯದಲ್ಲಿ ಖುದ್ದು ಸಾಕ್ಷಿದಾರನಾಗಿದ್ದರು.
2019ರಲ್ಲಿ ಈ ರೀತಿ ಹೂಡಲಾದ ಮಾನನಷ್ಟ ಮೊಕದ್ದಮೆಗೆ ಕಾಂಗ್ರೆಸ್ ನಾಯಕರು ಬಿಡಿ ಸ್ವತಃ ರಾಹುಲ್ ಗಾಂಧಿಯವರೇ ಗಮನ ಹರಿಸಲಿಲ್ಲ. ಮೋದಿ ಅನ್ನುವುದು ಒಂದು ಸಮಾಜದ ಉಪನಾಮವಾಗಿದ್ದು, ಕರ್ನಾಟಕದಲ್ಲಿ ಗಾಣಿಗರಿದ್ದ ಹಾಗೆ ಗಾಣದ ಎಣ್ಣೆ ತೆಗೆಯುವ ಇವರ ಕುಲ ಕಸುಬು ಮಾಡುವ ಹಿಂದುಳಿದ ಜಾತಿಗೆ ಸೇರಿದ್ದು ಗುಜರಾತ್ , ಛತ್ತಿಸ್ಗಢ್ , ರಾಜಸ್ಥಾನ , ಬಿಹಾರ, ಹರ್ಯಾಣ , ಮಧ್ಯಪ್ರದೇಶದಲ್ಲಿ ಈ ಸಮಾಜದವರನ್ನು ಕಾಣಬಹುದಾಗಿದೆ. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ, ಈ ಎಲ್ಲಾ ಕಳ್ಳರು ಮೋದಿ ಎಂಬ ಉಪನಾಮವನ್ನು ಹೇಗೆ ಹೊಂದಿದ್ದಾರೆ? ಅದೇ ರೀತಿಯಲ್ಲಿ ‘ಮೋದಿ’ ಎಂಬ ಉಪನಾಮ ಹೊಂದಿರುವ ಎಲ್ಲ ವ್ಯಕ್ತಿಗಳೂ ಕಳ್ಳರೇ ಎಂದು ದೂಷಿಸಿರುವುದು ವಯಕ್ತಿಕವಾಗಿ ನನಗೆಲ್ಲದೇ ನಮ್ಮ ಸಮುದಾಯಕ್ಕೆ ಮಾಡಿದ ಅವಮಾನವಾಗಿದ್ದು ಇದರಿಂದ ನಮಗೆ ಬಹಳ ನೋವನ್ನುಂಟು ಮಾಡಿದೆ ಎಂದು ಸೂಕ್ತ ದಾಖಲೆಗಳ ಮೂಲಕ ಪೋರ್ಣೇಶ್ ಮೋದಿಯವರು ವಕೀಲರ ಮುಲಕ ವಾದವನ್ನು ಮಂಡಿಸಿದ್ದರು.
ಪ್ರಕರಣ ಸ್ವಲ್ಪ ಗಂಭೀರ ಸ್ಥಿತಿಯನ್ನು ಪಡೆದುಕೊಂಡು ತಮ್ಮ ಬುಡಕ್ಕೇ ಬಿಸಿ ನೀರು ಕಾಯಿಸಬಹುದು ಎಂಬುದನ್ನು ಗ್ರಹಿಸಿದ ಕಾಂಗ್ರೇಸ್ ಕೂಡಲೇ ಈ ವಿಚಾರಣೆಯನ್ನು ರದ್ದು ಪಡಿಸಬೇಕೆಂದು ಗುಜರಾತ್ ಹೈಕೋರ್ಟಿನಲ್ಲಿ ಅರ್ಜಿಸಲ್ಲಿಸಿತ್ತು. ಇತ್ತೀಚೆಗೆ ಗುಜರಾತ್ ಹೈಕೋರ್ಟ್ ಈ ಪ್ರಕರಣದ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದ ನಂತರ ವಿಚಾರಣೆ ಪುನರಾರಂಭವಾಗಿ, ಅಂತಿಮವಾಗಿ ರಾಹುಲ್ ಗಾಂಧಿಯವರು ತಪ್ಪಿತಸ್ಥರು ಎಂಬ ತೀರ್ಮಾನವನ್ನು 23.03.23 ರಂದು ಘೋಷಿಸಿದ್ದಲ್ಲದೇ,15000/- ದಂಡ ಮತ್ತು 2 ವರ್ಷಗಳ ಕಾಲದ ಸೆರೆಮನೆಯ ವಾಸದ ಶಿಕ್ಶೆಯನ್ನು ವಿಧಿಸಿತು. ಆ ಕ್ಷಣದಲ್ಲಿ ಅಲ್ಲಿಯೇ ಖುದ್ದಾಗಿ ಇದ್ದ ರಾಹುಲ್, ಇದಕ್ಕೆ ಪ್ರತಿಯಾಗಿ ಮೇಲ್ಮನವಿ ಸಲ್ಲಿಸಲು ಜಾಮೀನು ನೀಡಬೇಕೆಂದು ಹೋರಿದ್ದನ್ನು ಪುರಸ್ಕರಿಸಿದ ನ್ಯಾಯಾಲಯ,30 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸುವಂತೆ ಅದೇಶಿಸಿ ಜಾಮೀನುನೀಡಿದ್ದಲ್ಲದೇ, ಸೆರೆಮನೆಗೆ ಹೋಗುವ ಶಿಕ್ಷೆಯನ್ನು30 ದಿನಗಳ ಕಾಲ ಅಮಾನತುಗೊಳಿಸಿತು.
ನ್ಯಾಯಾಲಯದಲ್ಲಿ ಈ ರೀತಿಯ ಆದೇಶ ಬರುತ್ತಿದ್ದಂತೆಯೇ ಕಾಂಗ್ರೇಸ್ ಮತ್ತು ಇತರೇ ವಿರೋಧ ಪಕ್ಷಗಳು ಒಬ್ಬ ವ್ಯಕ್ತಿಗೆ ಬೈದಿದ್ದಕ್ಕಾಗಿ ವಿಪಕ್ಷ ನಾಯಕನಿಗೆ ಎರಡು ವರ್ಷ ಜೈಲು ಶಿಕ್ಷೆಯನ್ನು ಮೋದಿಯವರು ವಿಧಿಸಿದ್ದಾರೆ, ಮೋದಿಯವರ ವಿರುದ್ಧ ಮಾತನಾಡುವವರನ್ನು ಧಮನಿಸುವ ಕುತಂತ್ರ, ಇದೊಂದು ರಾಜಕೀಯ ದ್ವೇಷ, ಮೋದಿಯವರದ್ದು ಸರ್ವಾಧಿಕಾರಿ ಧೋರಣೆ. ಈ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ ಎಂದೆಲ್ಲಾ ಅಬ್ಬರಿಸಿ ಬೊಬ್ಬಿರಿದು. ಮೋದಿ ತನಗೆ ಬೈದವರನ್ನೆಲ್ಲ ಜೈಲಿಗೆ ಹಾಕಿಸುತ್ತಾರೆ ಎಂದು ಹೇಳಿ ಜನರ ದಿಕ್ಕನ್ನು ತಪ್ಪಿಸಲು ಪ್ರಯತ್ನಿಸಿದರು.
ಗಾಯದ ಮೇಲೆ ಬರೆ ಎಳೆದಂತೆ ಒಬ್ಬ ಜನಪ್ರತಿನಿಧಿ 2 ಅಥವಾ ಅದಕ್ಕಿಂತಲೂ ಹೆಚ್ಚಿನ ವರ್ಷ ಸೆರೆಮನೆಯ ಶಿಕ್ಷೆಯನ್ನು ಅನುಭವಿಸುವಂತಾದರೇ ಆತನ ಸದಸ್ವತ್ಯವ ರದ್ದು ಪಡಿಸಬಹುದು ಎಂಬ 1951ರ ಜನಪ್ರತಿನಿಧಿ ಕಾಯ್ದೆಯ ಅನುಗುಣವಾಗಿ 24.03.23 ರಂದು ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದ ಕಾರಣ ಮುಂದಿನ 8 ವರ್ಷಗಳ ಕಾಲ ರಾಹುಲ್ ಯಾವುದೇ ಚುನಾವಣೆಯಲ್ಲಿ ಸ್ಪರ್ಥಿಸಲು ಸಾಧ್ಯವಿಲ್ಲ. ಅಕಸ್ಮಾತ್ ರಾಹುಲ್ ಹೈಕೋರ್ಟ್.ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿ ಅಲ್ಲಿಂದ ಈ ತೀರ್ಪು ಅಮಾನತು ಆದಲ್ಲಿ ಮಾತ್ರವೇ ರಾಹುಲ್ ಸಾಂಸದರಾಗಿ ಮುಂದುವರೆಯಬಹುದು.
ಮೊದಲು ಕ್ರಿಮಿನಲ್ ಅಪರಾಧಿ ಎಂದು ತೀರ್ಪು ಅದಾದ ನಂತರ ಸಂಸತ್ ಸದಸ್ಯತ್ವದಿಂದ ಅನರ್ಹತೆ. ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಹೀಗೆ ಏಕಾ ಏಕಿ ತಮ್ಮ ಪಕ್ಷದ ನಾಯಕನಿಗೆ ಶಿಕ್ಷೆ ಆದದ್ದನ್ನು ಸಹಿಸಲಾರದ ಕಾಂಗ್ರೇಸ್ ಪಕ್ಷ ದೆಹಲಿಯಲ್ಲಿ ಕ್ಷಿಪ್ರವಾಗಿ ಪುಂಡಾಟ ನಡೆಸಿದೆಯಲ್ಲದೇ, ಯಥಾ ಪ್ರಕಾರ ದೇಶದ ಇತಿಹಾಸದಲ್ಲಿ ಇಂದೊಂದು ಕರಾಳ ದಿನ. ಪ್ರಜಾಪ್ರಭುತ್ವದ ಕಗ್ಗೊಲೆ, ಕಾನೂನಾತ್ಮಕವಾಗಿ ವಿರೋಧ ಪಕ್ಷದ ನಾಯಕರನ್ನು ಹತ್ತಿಕ್ಕುವ ಕ್ರಮ, ದ್ವೇಷದ ರಾಜಕೀಯ, ಸರ್ವಾಧಿಕಾರಿಯ ಧೋರಣೆ ಎಂಬ ಹಳೇ ಸವಕಲು ಹೇಳಿಕೆಗಳನ್ನು ನೀಡಿರುವ ಜೊತೆಯಲ್ಲೇ ಸೋಮವಾರದಿಂದ ದೇಶಾದ್ಯಂತ ಉಗ್ರ ಹೋರಾಟವನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ರಾಜ್ಯ ಪ್ರದೇಶ ಕಾಂಗ್ರೇಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ದೇಶಕ್ಕಾಗಿ ತ್ಯಾಗ ಮಾಡಿದ ಗಾಂಧಿ ಕುಟುಂಬದ ಸದಸ್ಯರಾದ ರಾಹುಲ್ ಗಾಂಧಿಯವರನ್ನು ಈ ರೀತಿಯಾಗಿ ದ್ವೇಷದ ರಾಜಕಾರಣದಿಂದ ಹತ್ತಿಕ್ಕಲಾಗದು ಎಂಬು ತಮ್ಮ ಭಟ್ಟಂಗಿತನವನ್ನು ಪ್ರದರ್ಶಿಸಿದರೆ, ಇನ್ನು ಯುವ ಕಾಂಗ್ರೇಸ್ ಅಧ್ಯಕ್ಷ ನಲಪಾಡ್ ಹುಚ್ಚುಚ್ಚಾಗಿ ಅಬ್ಬರಿಸುತ್ತಾ, ಹೌದು ನಮ್ಮ ಸರ್ವೋಚ್ಚ ನಾಯಕ ರಾಹುಲ್ ಅವರ ಹೇಳಿಕೆಯನ್ನು ನಾನು ಸಮಾರ್ಥಿಸುತ್ತೇನೆ. ಮೋದಿ ಎಂಬುವವರೆಲ್ಲಾ ಕಳ್ಳರೇ. ನನ್ನ ಮೇಲೂ ಕೇಸ್ ಹಾಗಿ ನನ್ನನ್ನೂ ಜೈಲಿಗೆ ತಳ್ಳಿ ಎಂದು ಹೇಳುವ ವೀಡೀಯೋ ವೈರಲ್ ಆಗಿದೆ.
ಸ್ವಲ್ಪ ತಾಳ್ಮೆಯಿಂದ ಈ ಪ್ರಕರಣವನ್ನು ಅವಲೋಕನ ಮಾಡಿದಲ್ಲಿ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆಯಾಗಿದ್ದು, ಕೇವಲ ನೀರವ್ ಮೋದಿ, ಲಲಿತ್ ಮೋದಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಿದ್ದಕ್ಕಾಗಿ ಅಲ್ಲಾ. ಅದರ ಮುಂದುವರೆದ ಭಾಗವಾಗಿ ‘ಮೋದಿ’ ಎಂಬ ಅಡ್ಡ ಹೆಸರಿರುವ ಎಲ್ಲರೂ ಕಳ್ಳರೇ. ಇನ್ನು ಸ್ವಲ ದಿನ ಕಾಯಿರಿ. ಮತ್ತಷ್ಟು ಕಳ್ಳ ಮೋದಿಯವರು ಹೊರಬರುತ್ತಾರೆ ಎಂದು ಕುಹಕವಾಡಿದ್ದರ ಪರಿಣಾಮ, ಮೋದಿ ಎಂಬ ಅಡ್ಡ ಹೆಸರನ್ನು ಹೊಂದಿರುವ ಪೂರ್ಣೇಶ್ ಎಂಬ ಗುಜರಾತ್ ಶಾಸಕರು ಹಾಕಿದ್ದ ಮಾನನಷ್ಟ ಮೊಕ್ಕದ್ದಮ್ಮೆ ಕಾರಣವಾಗಿದೆ. ನೇರವಾಗಿ ಬೈಯಿಸಿಕೊಂಡಿದ್ದ ಆ ಮೂವರು ಮೋದಿಗಳು ಈ ಪ್ರಕರಣದಲ್ಲಿ ಕೋರ್ಟಿಗೆ ಹೋಗಿರಲಿಲ್ಲ.
ಚುನಾವಣಾ ಪ್ರಚಾರದ ಭರಾಟೆಯಲ್ಲಿ ಆವೇಶದಲ್ಲಿ ಈ ರೀತಿಯ ಸಡಿಲ ಮಾತುಕತೆಗಳು ರಾಜಕೀಯ ನಾಯಕರುಗಳಿಂದ ಉದುರುವುದು ಸಹಜ. ಆದರೆ ಬಹುತೇಕ ಸಮಯದಲ್ಲಿ ಅವರ ಮಾತುಗಳಿಗೆ ಅಕ್ಷೇಪ ವ್ಯಕ್ತ ಪಡಿಸಿದ ಕೂಡಲೇ, ವಯಕ್ತಿಕವಾಗಿ ಯಾರನ್ನೂ ನೋಯಿಸುವ ಉದ್ದೇಶವಿಲ್ಲದೇ, ಮಾತಿನ ಬರದಲ್ಲಿ ಹೀಗೆ ಆಡಿದ್ದೇನೆ ಅದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ ಕೂಡಲೇ ಕ್ಷಮಿಸಿದ ಉದಾಹರಣೆಗಳು ಎಷ್ಟೋ ಇದೆ. ಸದ್ಯಕ್ಕೆ ಶತ್ರುವಿನ ಶತ್ರು ಮಿತ್ರ ಎನ್ನುವಂತೆ ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಳ್ಳುತ್ತಿರುವ ಮೋದಿಯವರನ್ನು ಪರಮ ಶತ್ರು, ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಸಹಾ ಇದೇ ರೀತಿ ಹುಚ್ಚುಚ್ಚಾಗಿ ಮಾತನಾಡಿ ಮಾನನಷ್ಠ ಮೊಕ್ಕದ್ದಮ್ಮೆ ಹಾಕಿಸಿಕೊಂಡು ನಂತರ ನ್ಯಾಯಾಲಯದಲ್ಲಿ ಮತ್ತು ಬಹಿರಂಗವಾಗಿ ಕ್ಷಮೆ ಕೇಳಿ ಶಿಕ್ಷೆ ಯನ್ನು ತಪ್ಪಿಸಿಕೊಂಡಿರುವ ಉದಾಹರಣೆಗಳು ಕಣ್ಣಮುಂದಿದೆ .
ಇದೇ ರೀತಿಯಲ್ಲೇ ರಾಹುಲ್ ಸಹಾ ಕ್ಷಮೆ ಕೇಳಿದ್ದರೆ ಪ್ರಕರಣ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಉಗುರಿನಲ್ಲಿ ಚಿವುಟಿ ಹಾಕಬಹುದಾಗಿದ್ದದ್ದಕ್ಕೆ ಕೊಡಲಿಯನ್ನು ತೆಗೆದುಕೊಂಡರು ಎನ್ನುವಂತೆ, ರಾಹುಲ್ ಸ್ವಪ್ರತಿಷ್ಟೆ ತನ್ನ ಅಹಂಮಿಕೆ ಮತ್ತು ಈ ಪ್ರಕರಣದ ಗಂಭೀರತೆ ಅರಿಯದೇ ಉಡಾಫೆ ತನದಿಂದ ಸ್ವಯಂ ಕೃತ ಅಪರಾಧ ಮಾಡಿಕೊಂಡು ಈಗ ಬಿಜೆಪಿ, ಕೇಂದ್ರ ಸರ್ಕಾರ, ಮೋದಿಯವರ ಮೇಲೆ ಹರಿ ಹಾಯುತ್ತಿರುವುದು ಹಾಸ್ಯಾಸ್ಪದವಾಗಿದೆಯಲ್ಲದೇ ರಾಹುಲ್ ತನ್ನ ಮತ್ತು ಕಾಂಗ್ರೇಸ್ ಪಕ್ಷದ ಗುಂಡಿಯನ್ನು ತಾನೇ ತೋಡಿಕೊಂಡ ಹಾಗಿದೆ. ರಾಯಲ್ ತಪ್ಪು ಹೇಳಿಕೆಯಿಂದಾಗಿ ಈ ಪ್ರಕರಣ ಆರಂಭವಾಗಿದೆ ಎಂಬ ಸತ್ಯ ಸಂಗತಿಯನ್ನು ಮುಚ್ಚಿಟ್ಟ ಕಾಂಗ್ರೆಸ್ ನಾಯಕರುಗಳು, ತಮ್ಮ ರಾಜಕೀಯ ಲಾಭಕ್ಕಾಗಿ ಮೋದಿಯವರನ್ನು ದೂಷಿಸುತ್ತಿರುವುದು, ಕಾಂಗ್ರಸ್ಸಿಗರ ಬೌದ್ಧಿಕ ದೀವಾಳಿತನ ಮತ್ತು ಪುಂಡಾಟಿಕೆ ಜನರಿಗೆ ಅರ್ಥವಾಗುತ್ತಿದೆ.
ಇನ್ನೂ ಕುತೂಹಲಕಾರಿಯದ ವಿಷಯವೇನೆಂದರೆ, ಹೀಗೆ ಜನಪ್ರತಿನಿಧಿ ಕಾಯ್ದೆಯ ಅಡಿಯಲ್ಲಿ ನ್ಯಾಯಾಲಯ ಅಪರಾಧಿ ಎಂದು ತೀರ್ಮಾನಿಸಿದರೂ ಅದು ಕೂಡಲೇ ಜಾರಿ ಆಗದಂತೆ ತಡೆಯುವ ಸಲುವಾಗಿ, ಈ ಕಾಯ್ದೆಯ ತಿದ್ದುಪಡಿಯನ್ನು 2013ರಲ್ಲಿ ಆಗಿನ ಪ್ರಧಾನ ಮಂತ್ರಿಗಳಾಗಿದ್ದ ಮನಮೋಹನ್ ಸಿಂಗ್ ಅವರು ತರಲು ಮುಂದಾಗಿದ್ದರು. ಸದಾಕಾಲವೂ ಅಧಿಕಾರದಲ್ಲೇ ಇರುತ್ತೇವೆ ಎಂಬ ಭ್ರಮಾ ಲೋಕದಲ್ಲಿ ವಿಹರಿಸುತ್ತಿದ್ದ ಇದೇ ರಾಹುಲ್ ಗಾಂಧಿ ಈ ಕಾಯ್ದೆಯ ಬದಲಾವಣೆಗಳು ವಿರೋಧ ಪಕ್ಷಗಳ ಪರವಾಗಿದೆ ಎಂಬ ಭ್ರಮೆಯಿಂದ, ತುರ್ತಾಗಿ ಪತ್ರಿಕಾಗೋಷ್ಠಿಯನ್ನು ಪ್ರಧಾನ ಮಂತ್ರಿಗಳ ಆದೇಶದ ಪ್ರತಿಯನ್ನು ಸಾರ್ವಜನಿಕವಾಗಿ ಹರಿದು ಹಾಕುವ ಮೂಲಕ ಪ್ರಧಾನಿಗಳನ್ನು ಅವಮಾನಿದ ಕಾರಣ, ಬಹಳ ನೋವಿನಿಂದ ಆ ಕಾಯ್ದೆಯ ತಿಡ್ಡುಪಡಿಯನ್ನು ಮನಮೋಹನ್ ಸಿಂಗ್ ಕೈ ಬಿಟ್ಟಿದ್ದರು.
ಈಗ ಮಾಡಿದ್ದುಣ್ಣೊ ಮಹರಾಯ ಎನ್ನುವಂತೆ, ಸ್ವಂತ ಬುದ್ದಿ ಇಲ್ಲದ, ವಂಧಿಮಾಗಧರ ಮಾತುಗಳಿಂದಾಗಿ ಮಸೂದೆಯ ತಿದ್ದುಪಡಿಯ ಕರುಡನ್ನು ಹಾಕಿದ ಫಲವನ್ನು ಇಂದು ಸ್ವತಃ ರಾಹುಲ್ ಗಾಂಧಿಯವರೇ ಅನುಭವಿಸುವಂತಾಗಿದೆ ಅಷ್ಟೇ ಹೊರತು ಇದರ ಹಿಂದೆ ಯಾವುದೇ, ಯಾರದ್ದೇ ರಾಜಕೀಯ ದ್ವೇಷಗಳು ಇಲ್ಲಾ ಎನ್ನುವುದು ಮೇಲ್ನೋಟಕ್ಕೆ ಸಾಭೀತಾಗುತ್ತಿದೆ ಈ ದೇಶದಲ್ಲಿ ಕಾನೂನು ಸರಿಯಾಗಿ ಇಲ್ಲಾ. ಎಂದು ಮೊನ್ನೆ ತಾನೇ ವಿದೇಶದಲ್ಲಿ ಗೀಳಿಟ್ಟಿದ್ದ ರಾಹುಲ್ ನಿಗೆ ಈಗ ಈ ದೇಶದ ಕಾನೂನಿನ ಮೂಲಕವೇ ತನ್ನ ಲೋಕಸಭೆಯ ಸದಸ್ಯತ್ವವನ್ನು ಕಳೆದು ಕೊಂಡಿರುವುದಲ್ಲದೇ, ಮುಂದಿನ ಎಂಟು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲದಿರುವುದು ಸ್ವಯಂಕೃತಪರಾಧವೇ ಅಗಿದೆ.
ಉದ್ದೇಶಪೂರ್ವಕವಾಗಿಲ್ಲದೇ, ಕೇವಲ ಚುನಾವಣಾ ಭಾಷಣದಲ್ಲಿ ಆವೇಶ ಭರಿತವಾಗಿ ಆಡಿದ ಮಾತುಗಳಾಗಿತ್ತು. ಇದರಿಂದ ಯಾರಿಗಾದರೂ ನೋವಾಗಿದ್ದರೆ ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ನ್ಯಾಯಾಧೀಶರಲ್ಲಿ ಒಂದು ಸಾಲಿನ ಕ್ಷಮೆ ಯಾಚನೆ ಮಾಡಿದ್ದರೆ ರಾಹುಲ್ ಗಾಂಧಿಗೆ ಇಂದು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಈಗಾಗಲೇ ಚೌಕಿದಾರ್ ಚೋರ್ ಎಂದು ಹೇಳಿದ ನಂತರ ನ್ಯಾಯಾಲದದಲಿ ಕ್ಷಮೆ ಯಾಚಿಸಿದ್ದಾಗಿತ್ತು. ಇನ್ನು ಆರ್ಎಸ್ಎಸ್ ಮಹಾತ್ಮಾ ಗಾಂಧಿಯವರನ್ನು ಕೊಂದಿದೆ ಎಂದಿದ್ದಕ್ಕೂ ಕ್ಷಮೆಯಾಚಿಯಾಗಿತ್ತು. ರಕ್ಷಣಾ ಪಡೆಗಳನ್ನು ಅವಮಾನಿಸಿದ್ದಕ್ಕಾಗಿಯೂ ಕ್ಷಮೆಯಾಚಿದಿದ್ದಾಗ ಇಲ್ಲದಿದ್ದ ಪ್ರತಿಷ್ಟೆ ಇದ್ದಕ್ಕಿದ್ದಂತೆಯೇ ಈಗ ವೀರ ಸಾವರ್ಕರ್ ಅವರ ವಿಷಯ ಎಲ್ಲಿಂದ ಬಂದು ಎನ್ನುವುದೇ ಅಚ್ಚರಿಯ ಸಂಗತಿ. 50 ವರ್ಷಗಳ ಕಾಲ ಕಾಲಾಪಾನಿ ಶಿಕ್ಷೆಗೆ ಗುರಿಯಾಗಿ 17 ವರ್ಷಗಳ ಕಾಲ ಕಠಿಣ ಶಿಕ್ಷೆಯನ್ನೂ ಅನುಭವಿಸುತ್ತಾ, ತಮ್ಮ ಯೌವನ ಈ ದೇಶಕ್ಕೆ ಸ್ವಾತ್ರಂತ್ರ್ಯ ತಂದು ಕೊಡಲು ಹೋರಾಟ ಮಾಡದೇ ಈ ರೀತಿಯಾಗಿ ವ್ಯಯವಾಗುತ್ತಿದೆಯಲ್ಲಾ ಎಂಬ ಮನಸ್ಥಿತಿಯಿಂದ ಕ್ಷಮಾಪಣಾ ಪತ್ರ ಬರೆದದ್ದಕ್ಕೂ, ಆಗಾಗ್ಗೇ ದೇಶದಿಂದ ಯಾರಿಗೂ ಹೇಳದೇ ಕೇಳದೇ ವಿದೇಶಗಳಿಗೆ ಪರಾರಿಯಾಗಿ ಮೋಜು ಮಸ್ತಿ ಮಾಡುತ್ತಾ, ಇದ್ದಕ್ಕಿದ್ದಂತೆಯೇ ತನ್ನ ಹರುಕು ಬಾಯಿಯಿಂದ ಹೋದ ಬಂದ ಕಡೆಯಲ್ಲೆಲ್ಲಾ ದೇಶವನ್ನು ಅವಹೇಳನ ಮಾಡುವ ರಾಹುಲ್ ಗಾಂಧಿ ಹೋಲಿಸಿಕೊಂಡಿದ್ದು ಆತನ ರಾಜಕೀಯ ಎಳಸು ತನಕ್ಕೆ ಜ್ವಲಂತ ಸಾಕ್ಷೆಯಾಗಿದೆ. ರಾಜಕೀಯ ಪ್ರಬುದ್ಧತೆ ಇರುವ ಯಾವುದೇ ರಾಜಕೀಯ ನಾಯಕರೂ ಈ ಪರಿಯಾಗಿ ಬಾಲಿಷವಾಗಿ ವ್ಯವಹರಿಸುವುದಿಲ್ಲ. ಅಹಂಕಾರ ಇರಬೇಕು. ಆದರೇ ದುರಹಂಕಾರ ಇದ್ದಲ್ಲಿ ಅದಕ್ಕೆ ತಕ್ಕ ಬೆಲೆಯನ್ನು ತೆರಲೇ ಬೇಕು.
ಒಬ್ಬ ವ್ಯಕ್ತಿ ಕಳ್ಳ ಆಗಿದ್ದ ಮಾತ್ರಕ್ಕೆ ಇಡೀ ಜಾತಿ ಅಥವಾ ಧರ್ಮವನ್ನು ಹೀನಾಮಾನವಾಗಿ ದೂಷಣೆ ಮಾಡಲಾಗದು ಎನ್ನುವುದು ಈಗ ನ್ಯಾಯಾಲಯದಿಂದಲೇ ಸಾಭಿತಾಗಿರುವ ಕಾರಣ, ರಾಜಕಾರಣಿಗಳಷ್ಟೇ ಅಲ್ಲದೇ ಎಲ್ಲರೂ ಸಹಾ ಎಚ್ಚರಿಕೆಯಿಂದ ಅಳೆದು ತೂಗಿ ಮಾತನಾಡ ಬೇಕಾಗಿದೆ. ಈ ದೇಶದ ಅವನತಿಗೆ ತುಪ್ಪಾ ತಿನ್ನುವ ಬ್ರಾಹ್ಮಣರೇ ಕಾರಣ ಎಂದು ಹಾದಿ ಬೀದಿಯಲ್ಲಿ ಹೇಳುತ್ತಾ ಹೊಟ್ಟೆ ಹೊರೆದು ಕೊಳ್ಳುತ್ತಿದ್ದವರೆಲ್ಲಾ, ಇನ್ನು ಮುಂದೆ ನಿರುದ್ಯೋಗಿಗಳಾಗಿ ಹೊಟ್ಟೆ ಪಾಡಿಗೆ ಬೇರೆ ಉದ್ಯೋಗವನ್ನು ಹುಡುಕಬೇಕಾಗುತ್ತದೆ. ತೂತು ಒಲೆ ಕೆಡಿಸಿತು, ಮಾತು ಮನೆ ಕೆಡಿಸಿತು ಎನ್ನುವಂತೆ ಈಗ ನಡೆದದ್ದೆಲ್ಲವೂ ಕಾನೂನು ಕ್ರಮವಾಗಿದ್ದು, ನ್ಯಾಯಾಲಯದ ತೀರ್ಪನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವೇ ಆಗಿದೆ.
ಏನಂತಿರಿ?
ನಿಮ್ಮವನೇ ಉಮಾಸುತ