ಆಚಾರ್ಯ ದೇವೋಭವ

ಅಮೇರಿಕಾದ ಮಾಜಿ ಅಧ್ಯಕ್ಷರಾಗಿದ್ದಂತಹ ಜಾನ್ ಎಫ್ ಕೆನಡಿಯವರು Success has many fathers, but failure is an orphan ಎಂಬ ಮಾತುಗಳನ್ನು ಆಡಿದ್ದರು. ಅಂದರೆ ಯಾರೇ ಯಾವುದೇ ಕೆಲದಲ್ಲಿ ಯಶಸ್ಸಿ ಆಗುತ್ತಿದ್ದಂತೆಯೇ ಅದರ ಶ್ರೇಯವನ್ನು ಪಡೆಯಲು ನಾನು ನಾನು ಎಂದು ನೂರಾರು ಜನರು ಮುಂದೆ ಬರುತ್ತಾರೆ. ಆದರೆ ಯಾರೇ ಯಾವುದೇ ಕಾರ್ಯದಲ್ಲಿ ವೈಫಲ್ಯ ಕಾಣುತ್ತಿದ್ದಂತೆಯೇ ಜತೆಗಿದ್ದವರೂ ಪರಾರಿಯಾಗಿ ಅನಾಥ ಪ್ರಜ್ಞೆಯನ್ನು ಮೂಡಿಸುತ್ತಾರೆ ಎನ್ನುವ ಸುಂದರವಾದ ಮಾತಿದು. ಯಾಕಪ್ಪಾ ಇಷ್ಟೆಲಾ ಪೀಠಿಕೆ ಎಂದರೆ, ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆಯವರು ತಮ್ಮ ಕ್ಷೇತ್ರದ ಭಾಗವಾಗಿರುವ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಎಸ್ ಎಸ್ ಎಲ್ ಸಿ ಫಲಿತಾಂಶ ಈ ಬಾರಿ 94% ಪಡೆಯುತ್ತಿದ್ದ ವಿಷಯ ತಿಳಿಯುತ್ತಿದ್ದಂತೆಯೇ, ಆ ಶಾಲೆಗೆ ಹೋಗಿ ಅಲ್ಲಿನ ಮುಖ್ಯೋಪಾಧ್ಯಾಯಿನಿ ಆಗಿರುವ ಶ್ರೀಮತಿ ಜಯಂತಿ ಟೀಚರ್ ಅವರ ಕಾಲು ಮುಟ್ಟಿ ನಮಸ್ಕರಿಸುವ ಮೂಲಕ ನಮ್ಮ ಸನಾತನ ಧರ್ಮದ ಆಚಾರ್ಯ ದೇವೋಭವ ಉಕ್ತಿಗೆ ಮೇಲ್ಪಂಕ್ತಿ ಹಾಕಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ನಮಗೆಲ್ಲಗಿಗೂ ತಿಳಿದಿರುವಂತೆ ಇಂದಿನ ಉಡುಪಿ ಜಿಲ್ಲೆಯು ಈ ಹಿಂದೆ ಅವಿಭಜಿತ ದಕ್ಷಿಣ ಕನ್ನಡದ ಭಾಗವಾಗಿದ್ದು ಶೈಕ್ಷಣಿಕ ಕ್ಷೇತ್ರದಲ್ಲಿ ಸದಾ ಕಾಲವೂ ಮುಂದಿದ್ದು, ನಂತರ ದಕ್ಷಿಣ ಕನ್ನಡದಿಂದ ಉಡುಪಿ ಜಿಲ್ಲೆಯಾಗಿ ವಿಭಜಿತಗೊಂಡರೂ ಇಡೀ ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಲವಾರು ವರ್ಷಗಳಿಂದ ಎರಡನೇ ಸ್ಥಾನವನ್ನು ಸುಭಧ್ರವಾಗಿಸಿಕೊಂಡಿದ್ದು, ಅದೇ ಉಡುಪಿ ಜೆಲ್ಲೆಯ ಭಾಗವಾದ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ವರ್ಷ 2025ರಲ್ಲಿ ಕೇವಲ 35% ಫಲಿತಾಂಶ ಪಡೆದು ಕ್ಷೇತ್ರದ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಿತ್ತು.

ತಮ್ಮ ಕ್ಷೇತ್ರದ ಈ ಶಾಲೆಯು ಶೈಕ್ಷಣಿಕವಾಗಿ ಹಿಂದುಳಿದಿರುವ ವಿಚಾರವನ್ನು ತಿಳಿದ ಬೈಂದೂರು ಕ್ಷೇತ್ರದ ಶಾಸಕರು ಮತ್ತು ಬರಿಗಾಲು ಸಂತ ಎಂದೇ ಪ್ರಸಿದ್ಧರಾಗಿರುವ ಗುರುರಾಜ್ ಗಂಟಿಹೊಳೆಯವರು ಅದನ್ನು ಗಂಭೀರವಾಗಿ ಪರಿಗಣಿಸಿ, ಅಲ್ಲಿನ ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಶಾಲಾ ಸಿಬ್ಬಂಧಿಗಳೊಂದಿಗೆ ಮಾತನಾಡಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆ ಅತ್ಯುತ್ತಮ ಫಲಿತಾಂಶ ಪಡೆಯ ಬೇಕೆಂಬ ಆಸೆಯನ್ನು ವ್ಯಕ್ತ ಪಡಿಸಿ ಅದಕ್ಕೆ ತಮ್ಮ ಕಡೆಯಿಂದ ಯಾವ ರೀತಿಯ ಸಹಾಯ ಬೇಕಿದ್ದರೂ ತಿಳಿಸಬೇಕೆಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಂತಿ ಟೀಚರ್ ಮತ್ತು ಅವರ ಶಿಕ್ಷಕ ತಂಡದವರಿಗೆ ಮನವಿ ಮಾಡಿಕೊಂಡಿದ್ದರು. ಶಾಸಕರ ಈ ಮನವಿಯನ್ನೇ ಸವಾಲಾಗಿ ಸ್ವೀಕರಿಸಿದ್ದ ಶಾಲೆಯ ಜಯಂತಿ ಟೀಚರ್ ಮತ್ತವರ ಶಿಕ್ಷಕವೃಂದ ಬಹಳ ಶ್ರಮವಹಿಸಿ, ಓದಿನಲ್ಲಿ ಸ್ವಲ್ಪ ಹಿಂದಿದ್ದ ಮಕ್ಕಳಿಗೆ ಹೆಚ್ಚಿನ ಅವಧಿಯಲ್ಲಿ ಪಾಠ ಮಾಡಿ 2026ರ ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಾಗ, ಕೇವಲ ಆ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರಷ್ಟೇ ಅಲ್ಲದೇ ಇಡೀ ಊರಿಗೆ ಊರೇ ಹೆಮ್ಮೆ ಪಡುವಂತಹ 94% ಫಲಿತಾಂಶ ಪಡೆಯುವ ಮೂಲಕ ಬಹುತೇಕ ಹಿಂದಿನ ವರ್ಷಕ್ಕಿಂತ ಮೂರು ಪಾಲು ಹೆಚ್ಚಿನ ಸಾಧನೆಗೈದಿತ್ತು.

ತಮ್ಮ ಕ್ಷೇತ್ರದ ಶಿರೂರು ಸರ್ಕಾರಿ ಶಾಲೆಯು ತಮ್ಮ ಮನವಿಯನ್ನು ಸವಾಲಾಗಿ ಸ್ವೀಕರಿಸಿ ಈ ಪರಿಯ ಫಲಿತಾಂಶವನ್ನು ಪಡೆದು ತಮಗೆ ಹೆಮ್ಮೆಯನ್ನು ತಂದಂತಹ ವಿಷಯ ತಿಳಿಯುತ್ತಿದ್ದಂತೆಯೇ, ಈ ಸಾಧನೆ ತನ್ನದು ತನ್ನಿಂದಲೇ ಆದದ್ದು ಎಂಬ ಹಮ್ಮು ಬಿಮ್ಮು ತೋರದೇ, ಕೂಡಲೇ ಆ ಶಾಲೆಗೆ ಧಾವಿಸಿ ಬಂದ ಶಾಸಕರು, ಅತ್ಯುತ್ತಮ ಸಾಧನೆಗೈಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ ಜಯಂತಿ ಟೀಚರ್ ಮತ್ತವರ ಶಿಕ್ಷಕವೃಂದಕ್ಕೆ ಎಲ್ಲರ ಮುಂದೆಯೇ ಪಾದಕ್ಕೆರಗಿ ನಮಸ್ಕಾರ ಮಾಡುವ ಮೂಲಕ ಅಭಿನಂದನೆಗಳನ್ನು ತಿಳಿಸುವ ಮೂಲಕ ಗುರುಗಳ ಅಭಿನಂದನೆ ಮಾಡುವ ಹೊಸಾ ಸಂಪ್ರದಾಯವನ್ನು ಹುಟ್ಟು ಹಾಕಿರುವುದು ನಿಜಕ್ಕೂ ಅನನ್ಯ ಮತ್ತು ಅಭಿನಂದನಾರ್ಹವಾಗಿದೆ.

ಇತ್ತೀಚಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಬೇಕಾದರೂ ಹತ್ತಾರು ಜನರ ಶಿಫಾರಸ್ಸಿನ ಜೊತೆಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿರುವಾಗ, ಬಾಲ್ಯದಿಂದಲೂ ಸಂಘದ ಶಿಸ್ತಿನ ಸ್ವಯಂಸೇವಕನಾಗಿದ್ದು, ತಮ್ಮ ಓದು ಮುಗಿಸಿದ ನಂತರ ಯೌವನದಲ್ಲಿ ಸುಮಾರು 6 ವರ್ಷಗಳ ಕಾಲ ಒಂದು ಬಿಳಿ ಪಂಜೆ, ಬಿಳೀ ಅಂಗಿ ಹೆಗಲ ಮೇಲೊಂದು ಚೀಲ ನೇತು ಹಾಕಿಕೊಂಡು ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಕೊಡಗಿನಲ್ಲಿ ಪ್ರಚಾರಕರಾಗಿ ಕೆಲಸ ಮಾಡಿದ ನಂತರ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣದಲ್ಲೂ ಸಂಘದ ಕೆಲಸ ಮಾಡಿ, ಕೆಲವರ್ಷಗಳ ಕಾಲ ಬಿಜೆಪಿಯ ಉಡುಪಿಯ ಉಪಾಧ್ಯಕ್ಷರಾಗಿ ಪಕ್ಷದ ಸಂಘಟನೆಯನ್ನು ಮಾಡಿದ ನಂತರ ತಾನಾಯಿತು ತನ್ನ ಕೆಲಸವಾಯಿತು ಎಂದು ಯಲ್ಲಾಪುರದ ಕಾಡಿನ ಮಧ್ಯೆಯಲ್ಲಿರುವ ವಿಶ್ವ ದರ್ಶನ ಸೆಂಟ್ರಲ್ ಶಾಲೆಯ ಆಡಳಿತಾಧಿಕಾರಿಯಾಗಿದ್ದಂತಹ ಸರಳ ಸಜ್ಜನ ಆದರೆ ಅಷ್ಟೇ ಜನಾನುರಾಗಿದ್ದ ಗುರುರಾಜರ ನಾಯಕತ್ವವನ್ನು ಗುರುತಿಸಿ 2023ರ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರ ಬದಲಿಗೆ ಭಾರತೀಯ ಜನತಾಪಕ್ಷ ಗುರುರಾಜ್ ಗಂಟಿಹೊಳೆ ಎಲ್ಲರ ಪ್ರೀತಿಯ ಗುರುವಣ್ಣ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದಾಗ, ಅವರ ಪರಿಚಯವಿರದ ಅನೇಕರು ಈ ಬಡವರ ಮನೆಯ ಹುಡುಗ ಅಂದೆತಾ ಮಾಡ್ತಾನ್ ಕಣೀ? ಎಂದು ಹುಬ್ಬೇರಿದ್ದೇ ಹೆಚ್ಚು.

ಮನೆಯ ಕಷ್ಟದ ಪರಿಸ್ಥಿತಿಯ ನಡುವೆಯೂ ತಂದೆ ತಾಯಿಯರು ಕಲಿಸಿದ ಸಂಸ್ಕಾರ ಮತ್ತು ಸಂಸ್ಕೃತಿಗಳು ಮತ್ತು ಸಂಘದಲ್ಲಿ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂದು ಕಲಿತ ರಾಷ್ಟ್ರಪ್ರೇಮ ಅವರು ಶಾಸಕರಾಗಿ ಆಯ್ಕೆ ಆದ ನಂತರವೂ ಹಾಗೇಯೇ ಮುಂದುವರೆಸಿಕೊಂಡು ಹೋಗಿದ್ದು ನಿಜಕ್ಲೂ ಶ್ಲಾಘನೀಯವೇ ಸರಿ. ಅಧಿಕಾರ ಬಂದ ತಕ್ಷಣ ತಮ್ಮ ಜೊತೆಯಲ್ಲಿ ಇದ್ದವರನ್ನೆಲ್ಲಾ ಮರೆತು ಬಿಡುವವರೇ ಹೆಚ್ಚಾಗಿರುವಾಗ, ತಮಗೆ ಟಿಕೆಟ್ ಸಿಕ್ಕ ನಂತರ ತಮ್ಮ ಪರವಾಗಿ ತನು ಮನ ಧನದ ಸಹಾಯದೊಂದಿಗೆ ಸಹಕರಿಸಿದ ಎಲ್ಲರೊಂದಿಗೂ ಅದೇ ಅತ್ಮೀಯತೆಯನ್ನೇ ಇಂದಿಗೂ ಮುಂದುವರೆದಿಕೊಂಡು ಹೋಗುತ್ತಿದ್ದಾರೆ. ರಾಜಕಾರಣ ಎಂದರೆ ಹೊಲಸು, ಯುವಕರಂತೂ ರಾಜಕಾರಣಕ್ಕೆ ಬರಲೇ ಬಾರದು ಎಂದೆಲ್ಲಾ ಹೇಳುತ್ತಿರುವ ಸಂದರ್ಭದಲ್ಲಿ ಕೇವಲ 45 ವರ್ಷದ ಸಾಮಾನ್ಯ ಕುಟುಂಬದ ಯುವಕ ಗುರುರಾಜ ಗಂಟಿಹೊಳೆಯವರು ಶಾಸಕರಾಗಿರುವುದೇ ನಮ್ಮ ಪ್ರಜಾಪ್ರಭುತ್ವದ ಸೊಗಸು ಎಂದರೂ ತಪ್ಪಾಗದು. ತಮ್ಮ ಕ್ಷೇತ್ರದ ಜನರ ಆಶೋತ್ತರಗಳಿಗೆ ಬಹಳವಾಗಿ ಸ್ಪಂದಿಸುತ್ತಾ, ವಿಧಾನಸಭೆಯ ಅಧಿವೇಶನದಲ್ಲಿಯೂ ಸಹಾ ಜನರ ಒಳಿತಿಗಾಗಿ ಬಹಳ ಖಡಕ್ಕಾಗಿ ಪ್ರಶ್ನೆಗಳನ್ನು ಕೇಳುತ್ತಾ ಜನರ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕೊಡಿಸುತ್ತಿರುವುದು ಸಹಾ ಮೆಚ್ಚುವಂತ ವಿಷಯವಾಗಿದೆ.

ರಸ್ತೆಯಲ್ಲಿ ಮರವೊಂದು ಬಿದ್ದಿದ್ದರೆ, ಆ ದಾರಿಯನ್ನು ಬಿಟ್ಟು ಪಕ್ಕದ ದಾರಿಯಲ್ಲಿ ಹೋಗುವವನು ಬುದ್ದಿವಂತ.
ಅದೇ ಮರವನ್ನು ರಸ್ತೆಯಿಂದ ಆಚೆಗೆ ಸರಿಸಿ ರಸ್ತೆಯನ್ನು ಸುಗಮ ಗೊಳಿಸುವವನು ಹೃದಯವಂತ.
ಬುದ್ದಿವಂತ ಅಥವಾ ಹೃದಯವಂತ ಆಗುವುದು ನಮ್ಮ ಕೈಯಲ್ಲಿಯೇ ಇದೆ ಅಲ್ಲವೇ?
ಏನಂತೀರೀ?

ಎಂಬ ಉಲ್ಲೇಖವನ್ನು ಬಹಳ ಹಿಂದೆ ನಾನೇ ಬರೆದಿದ್ದೆ. ಕಾಕತಾಳೀಯವೆಂದರೆ, ಗುರುರಾಜರು ಶಾಸಕರಾದ ಕೆಲವು ತಿಂಗಳುಗಳ ನಂತರ ಕುಂದಾಪುರದಿಂದ ಹಾಲಾಡಿ ರಸ್ತೆ ಬದಿಯಲ್ಲಿ ಅಕೇಶಿಯಾ ಸಾಲು ಮರಗಳಿದ್ದು, ಹಲವು ವಾರಗಳಿಂದ ಬಿಟ್ಟೂ ಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಮರದ ಬುಡದ ಮಣ್ಣು ಸಡಿಲಗೊಂಡು ರಸ್ತೆಯ ಮೇಲೆ ಉರುಳಿ, ಸಂಚಾರಕ್ಕೆ ತೊಡಕು ಮಾಡುತ್ತಿತ್ತು. ಅದೇ ಮಾರ್ಗದಲ್ಲಿ ಗಂಟಿಹೊಳೆಯಾರೂ ಸಹಾ ಪ್ರಯಾಣಿಸುತ್ತಿದ್ದಾಗ ಪರಿಸ್ಥಿತಿಯನ್ನು ಕಂಡ ಕೂಡಲೇ ಅವರು ಬೇರೆ ರಸ್ತೆಯಲ್ಲಿ ಹೋಗದೇ, ಅವರ ಹೃದಯದಲ್ಲಿ ಸದಾಕಾಲವೂ ಜಾಗೃತವಾಗಿರುವ ಸ್ವಯಂಸೇವಕನ ಮನಸ್ಥಿತಿಯಿಂದಾಗಿ, ಕೂಡಲೇ ತಾನೊಬ್ಬ ಶಾಸಕ ಎಂಬುದನ್ನು ಮರೆತು ತಾನು ಜನರ ಸೇವಕ ಎಂದು ಬಗೆದು, ಪಂಚೆಯನ್ನು ಎತ್ತಿ ಕಟ್ಟಿ ತಮ್ಮ ಸಹಚರರು ಮತ್ತು ಅಲ್ಲಿದ್ದ ಸ್ಥಳೀಯರ ಸಹಾಯದಿಂದ ರಸ್ತೆಗೆ ಬಿದ್ದಿದ್ದ ಮರವನ್ನು ರಸ್ತೆಯಿಂದ ಆಚೆಗೆ ಸರಿಸಿ ತಾವೊಬ್ಬ ಹೃದಯವಂತ ಶಾಸಕ ಎಂಬುದನ್ನು ಅಕ್ಷರಶಃ ಸಾಭೀತು ಪಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಈಗ ತಮ್ಮ ಕ್ಷೇತ್ರದ ಶಾಲೆಯಲ್ಲಿ ಉತ್ತಮ ಫಲಿತಾಂಶ ಬರುವುದಕ್ಕೆ ಅಶಿರ್ನಿಶಿ ಶ್ರಮಿಸಿದ ಗುರುಗಳ ಕಾಲಿಗೆ ಬಿದ್ದು ನಮಸ್ಕಾರ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿರುವ ಬೈಂದೂರಿನ ಶಾಸಕರ ಈ ನಡೆಯು ಕೇವಲ ಅಲ್ಲಿ ನೆರೆದಿದ್ದವರಷ್ಟೇ ಅಲ್ಲದೇ ವೈರಲ್ ಆಗಿರುವ ವೀಡಿಯೋ ನೋಡಿದವರ ಕಣ್ಗಳಲ್ಲೂ ಅವರಿಗೇ ಅರಿವಿಲ್ಲದಂತೆ ಕಣ್ಣೀರು ತರಿಸುವುದಲ್ಲದೇ, ಅಯ್ಯೋ ನಮ್ಮ ಕ್ಷೇತ್ರಕ್ಕೂ ಇಂತಹದ್ದೇ ಶಾಸಕ ಸಿಗಬಾರದಿತ್ತೇ ಎಂದು ಮಮ್ಮಲ ಮರುಗುವುದಂತೂ ಸುಳ್ಳಲ್ಲಾ. ತನ್ನ ಕ್ಷೇತ್ರದಲ್ಲಿ ತಪ್ಪಾದಾಗ ಕ್ಷೇತ್ರದ ಪ್ರತಿನಿಧಿಯಾಗಿ ತಪ್ಪನ್ನು ತಿದ್ದಿ ಹೇಳಿ ಸರಿಪಡಿಸಲು ಪ್ರಯತ್ನಿಸಿ. ಅದೇ ಪ್ರಯತ್ನ ಗೆದ್ದಾಗ ಅಧಿಕಾರದ ಅಹಂ ಇಲ್ಲದೆ ಈ ರೀತಿ ನಡೆದುಕೊಂಡಾಗ ಜನರ ಮಧ್ಯೆ ಸಾಮಾನ್ಯರಲ್ಲಿ ಸಾಮಾನ್ಯರಾಗುವ ಈ ಸಾಮಾನ್ಯತನವೇ ಅವರನ್ನು ಬಹಳ ಬಹು ದೊಡ್ಡ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ ಎಂದರೂ ತಪ್ಪಾಗದು.  ಸಂಘಕ್ಕೆ ಮಕ್ಕಳನ್ನು ಕಳುಹಿಸಿದರೆ ಮಕ್ಕಳು ಹಾಳಾಗುತ್ತಾರೆ ಎಂದು ಬಾಯಿ ಬಾಯಿ ಬಡಿದುಕೊಂಡು ಅಪಚಾರ ಮಾಡುವವರಿಗೆ ಸಂಘದಿಂದ ಸಂಸ್ಕಾರ ಪಡೆದಂತಹ ವ್ಯಕ್ತಿ ಸಮಾಜದಲ್ಲಿ ಎಂತಹ ಪರಿಣಾಮ ಬೀರಬಲ್ಲರು ಎನ್ನುವುದಕ್ಕೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಯವರೇ ನೇರ ಸಾಕ್ಷಿ ಎಂದರೂ ತಪ್ಪಾಗದು. ಜನರಿಂದ ಜನರಿಗಾಗಿ ಮತ್ತು ಜನರಿಗೋಸ್ಕರವೇ ಕೊಟ್ಟ ಅಧಿಕಾರವನ್ನು ಅತ್ಯಂತ ಪ್ರಾಮಾಣಿಕವಾಗಿ ಬಳಸಿಕೊಂಡು ಉತ್ತಮವಾದ ಜನೋಪಕಾರಿ ಕೆಲಸಗಳನ್ನು ಮಾಡುತ್ತಿರುವ ಗುರುರಾಜರ ಅದರ್ಶಗಳು ನಮ್ಮ ಇಂದಿನ ಯುವ ಜನತೆಗೆ ಖಂಡಿತವಾಗಿಯೂ ಮಾದರಿ ಮತ್ತು ಪ್ರೇರಣಾದಾಯಕ ಆಗುತ್ತದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಗುರುರಾಜ್ ಗಂಟಿಹೊಳಿ ಅವರು ಶಾಸಕರಾದಾಗ ಬರೆದಿದ್ದ ಈ ಲೇಖನ ಅವರ ಕುರಿತಾದ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ

Leave a comment