ನಮ್ಮ ದೇಶ ಮತ್ತು ಚಿತ್ರರಂಗ ಎರಡೂ ಸಹಾ ಒಂದು ರೀತಿಯ ಪುರುಷ ಪ್ರಧಾನವಾಗಿದೆ ಎಂದರೂ ತಪ್ಪಾಗದು. ಸಮಾಜದಲ್ಲಿ ಮಹಿಳೆಯರನ್ನು ಅಬಲೆ ಎಂದು ಸದಾಕಾಲವೂ ಪುರುಷನ ಆಸರೆಯಲ್ಲೇ ಜೀವನ ನಡೆಸಬೇಕೆಂದು ಬಯಸಿದರೆ, ಇನ್ನು ಚಿತ್ರರಂಗದಲ್ಲಿಯೂ ಸಹಾ ಬಹುತೇಕ ಸಿನಿಮಾಗಳು ನಾಯಕನ ಸುತ್ತಲೇ ಗಿರಿಕಿ ಹೊಡೆಯುತ್ತಿದ್ದು, ನಾಮಕಾವಾಸ್ಥೆಗೆ ನಾಯಕನೊಂದಿಗೆ ಮರ ಸುತ್ತುತ್ತಾ ಯುಗಳ ಗೀತೆ ಹಾಡಲೆಂದೇ ಬಳಸಿಕೊಳ್ಳುತ್ತಾರೆ. ಅದೇ ರೀತಿ ನಾಯಕನಿಗೆ ಎಷ್ಟೇ ವಯಸ್ಸಾದರೂ ಆತ ನಾಯಕನ ಪಾತ್ರದಲ್ಲೇ ನಟಿಸುತ್ತಿದ್ದರೆ, ನಟಿಯರಿಗೆ ಸ್ವಲ್ಪ ವಯಸ್ಸಾಗಿಯೋ ಇಲ್ಲವೇ ಮದುವೆ ಆದ ತಕ್ಷಣ, ನಾಯಕಿ ಪಟ್ಟದಿಂದ ಅಕ್ಕ, ಅತ್ತಿಗೆ ಪಾತ್ರಕ್ಕೆ ಬದಲಾಯಿಸಿ, ಒಂದು ಸ್ವಲ್ಪ ವಯಸ್ಸಾಯಿತೆಂದರೆ ಯಾರ ಜೊತೆಯಲ್ಲಿ ನಾಯಕನಾಗಿ ನಟಿಸಿದ್ದರೋ ಅದೇ ನಾಯಕನ ತಾಯಿಯಾಗಿಯೇ ಅಭಿನಯಿಸಬೇಕಾಗುತ್ತದೆ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಎಲ್ಲಾ ಭಾಷೆಯ ಪ್ರಸಿದ್ಧ ನಾಯಕರುಗಳ ಜೊತೆಯಲ್ಲಿ ನಾಯಕಿಯಾಗಿ ನಟಿಸಿ ಖ್ಯಾತಿ ಪಡೆದು ನಂತರ ಅದೇ ನಾಯಕರಿಗೇ ಅಮ್ಮನಾಗಿ ನಟಿಸಿದ ಕೀರ್ತಿಯನ್ನೂ ಹೊಂದಿರುವ ಸುಮಾರು ಆರು ದಶಕಗಳ ಕಾಲ ಚಿತ್ರರಂಗದಲ್ಲಿದ್ದು, ಅಂತಿಮವಾಗಿ ಕನ್ನಡದ ಅಮ್ಮ ಎಂದೇ ಪ್ರಖ್ಯಾತರಾಗಿದ್ದ ಪಂಚಭಾಷಾ ತಾರೆ ಶ್ರೀಮತಿ ಪಂಡರೀಬಾಯಿಯವರು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾನಾಯಕಿ ಆಗಿದ್ದಾರೆ.
1950, 60 ಮತ್ತು 1970ರ ದಶಕಗಳಲ್ಲಿ ಕನ್ನಡ ಚಿತ್ರರಂಗವಲ್ಲದೇ ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟರುಗಳಾದ ರಾಜಕುಮಾರ್, ಎಂಜಿ ರಾಮಚಂದ್ರನ್, ಶಿವಾಜಿ ಗಣೇಶನ್ ರೊಂದಿಗೆ ನಟಿಸಿದ್ದ, ಕನ್ನಡ ಚಿತ್ರರಂಗದ ಮೊದಲ ಯಶಸ್ವಿ ನಾಯಕಿ ಎಂದು ಪರಿಗಣಿಸಲಾಗಿದ್ದ ಪಂಡರೀಬಾಯಿ ಅವರು ಉತ್ತರ ಕನ್ನಡದ ಕರಾವಳಿ ನಗರವಾದ ಭಟ್ಕಳದ ಸಂಪ್ರದಾಯಸ್ಥ ಕುಟುಂಬದ ಶ್ರೀ ರಂಗರಾವ್ ಮತ್ತು ಶ್ರೀಮತಿ ಕಾವೇರಿ ಬಾಯಿ ಅವರ ಹಿರಿಯ ಮಗಳಾಗಿ 18 ಸೆಪ್ಟೆಂಬರ್ 1928 ರಂದು ಜನಿಸುತ್ತಾರೆ. ಹುಟ್ಟಿದಾಗ ಆ ಪುಟ್ಟ ಮಗುವಿಗೆ ಗೀತ ಎಂಬ ಹೆಸರಿರುತ್ತದೆ. ಆಕೆಗೆ ಮೈನಾವತಿ ಎಂಬ ಸಹೋದರಿ (ಆಕೆಯೂ ಪ್ರಸಿದ್ಧ ನಟಿ) ಮತ್ತು ಸಹೋದರ ಇದ್ದರು.
ಬಾಲಕಿ ಗೀತ ಅವರ ಕುಟುಂಬ ಪಂಡರಾಪುರದ ಪಾಂಡುರಂಗನ ಪರಮ ಭಕ್ತರಾಗಿದ್ದ ಕಾರಣ, ಆಕೆಗೆ ಚಿಕ್ಕ ವಯಸ್ಸಿನಲ್ಲೇ ಪಂಡರಿಬಾಯಿ ಎಂದೇ ಕರೆಯಲಾರಂಭಿಸಿ ಅದೇ ಹೆಸರಿನಲ್ಲೇ ಪ್ರಖ್ಯಾತರಾಗುತ್ತಾರೆ. ಪಂಡರೀಭಾಯಿಯವರ ತಂದೆ ಚಿತ್ರಕಲಾ (ಡ್ರಾಯಿಂಗ್) ಶಿಕ್ಷಕರಾಗಿದ್ದಲ್ಲದೇ ಅತ್ಯಂತ ಸುಶ್ರಾವ್ಯವಾಗಿ ಹಾಡುತ್ತಿದ್ದದ್ದಲ್ಲದೇ, ಸ್ಥಳೀಯವಾಗಿ ರಂಗಭೂಮಿಯಲ್ಲಿ ನಟನೆ ಮಾಡುತ್ತಿದ್ದದ್ದಲ್ಲದೇ, ಹರಿಕಥೆ ದಾಸರಾಗಿ ಪ್ರಖ್ಯಾತರಾಗಿದ್ದರು. ಹೀಗೆ ಬಾಲ್ಯದಿಂದಲೇ ನಟನೆ ಮತ್ತು ಹರಿಕಥೆ ಪಂಡರೀ ಬಾಯಿಯವರಿಗೆ ತಂದೆಯವರಿಂದ ಬಳುವಳಿಯಾಗಿ ಬಂದಿತ್ತಲ್ಲದೇ, ಪುಟ್ಟ ವಯಸ್ಸಿನಲ್ಲೇ ತಂದೆಯ ಹರಿಕಥೆಗಳನ್ನು ಕೇಳೀ ಕೇಳೀ, 8-9ವರ್ಷದ ಪುಟ್ಟ ಬಾಲಕಿಯಾಗಿದ್ದಾಗಲೇ ಪಂಡರಿಬಾಯಿಯವರಿಗೆ ತಂದೆ ಮಾಡುತ್ತಿದ್ದ ಅಷ್ಟೂ ಹರಿಕಥೆಗಳು ಕಂಠಸ್ಥವಾಗಿದ್ದಲ್ಲದೇ ಆಗ್ಗಾಗ್ಗೇ ಆಕೆಯೂ ಕಾರ್ಯಕ್ರಮಗಳನ್ನು ನೀಡುವ ಮೂಲಕ ಎಲ್ಲರ ಮನಗೆದ್ದಿರುತ್ತಾರೆ.
ಅದೊಮ್ಮೆ ಮೈಸೂರಿನಲ್ಲಿ ನಡೆಯುತ್ತಿದ್ದ ತಮ್ಮ ತಂದೆಯವರ ಹರಿಕಥಾ ಕಾರ್ಯಕ್ರಮದಲ್ಲಿ ಕಡೆಯ ಗಳಿಗೆಯಲ್ಲಿ ಸ್ವಲ್ಪ ಸಮಸ್ಯೆಯಾಗಿ ಆ ಪುಟ್ಟ ಹುಡುಗಿ ಪಂಡರೀಬಾಯಿಯೇ ಹರಿಕಥೆಯನ್ನು ಮಾಡುವಂತಾದಾಗ, ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಸಂಗೀತ ಕಲಾನಿಧಿ ಪಿಟೀಲು ಚೌಡಯ್ಯನವರು ಆಕೆಯ ಸಾಮರ್ಥ್ಯವನ್ನು ಕಂಡು 1943ರಲ್ಲಿ ಕೆ.ಹಿರಣ್ಯಯ್ಯ ಹಾಗೂ ಎಂಎನ್ ಗೋಪಾಲ್ ಅವರ ಜಂಟಿ ನಿರ್ದೇಶನದಲ್ಲಿ ತಾವು ನಿರ್ಮಿಸುತ್ತಿದ್ದ ವಾಣಿ ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡುವ ಮೂಲಕ, ಅನಿರೀಕ್ಷಿತವಾಗಿ ಪಂಡರೀಬಾಯಿಯವರು ತಮ್ಮ 13ನೇ ವಯಸ್ಸಿನಲ್ಲಿ ನಟಿಯಾಗಿ ಚಲನಚಿತ್ರರಂಗವನ್ನು ಪ್ರವೇಶಿಸುತ್ತಾರೆ. ಮುಂದೆ ಹೊನ್ನಪ್ಪ ಭಾಗವತರ್ ಅವರ ಗುಣಸಾಗರಿ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕಿಯಾಗಿ ಭಡ್ತಿ ಹೊಂದುತ್ತಾರೆ. ಮೊದಲ ಎರಡೂ ಚಿತ್ರಗಳೂ ಹೇಳುವಂತಹ ಹೆಸರನ್ನು ತಂದು ಕೊಡದೇ ಹೋದರೂ, 1944ರಲ್ಲಿ ಸುಂದರ್ ರಾವ್ ಅವರು ನಿರ್ದೇಶಿಸಿದ್ದ ತಮಿಳು ಚಿತ್ರ ಹರಿದಾಸದಲ್ಲಿ ಎಂಕೆ ತ್ಯಾಗರಾಜಾ ಭಾಗವತರ್, ಟಿಆರ್ ರಾಜಕುಮಾರಿ ಮತ್ತು ಎನ್ ಸಿ ವಸಂತಕೋಕಿಲಂ ಜೊತೆ ಪಂಡರಿಬಾಯಿಗೆ ನಟಿಸಿದ್ದ ಚಿತ್ರ ತಮಿಳುನಾಡಿನ ಒಂದೇ ಸಿಮಿಮಾ ಮಂದಿರದಲ್ಲಿ ಬರೋಬ್ಬರಿ 110 ವಾರಗಳ ಕಾಲ ಪ್ರದರ್ಶನವಾಗಿ ಸೂಪರ್ ಡ್ಯೂಪರ್ ಹಿಟ್ ಆಗಿದ್ದಲ್ಲದೇ, ಗಲ್ಲಾಪೆಟ್ಟಿಗೆಯಲ್ಲಿಯೂ ಭರ್ಜರಿ ಗೆಲುವು ಕಂಡ ನಂತರ ಚಿತ್ರರಂಗದಲ್ಲಿ ಭದ್ರವಾಗಿ ನೆಲೆ ಊರತೊಡಗಿ ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆಯುತ್ತಾ ಬಂದರು. 1954ರಲ್ಲಿ ಎಚ್. ಎಲ್. ಎನ್ ಸಿಂಹ ಅವರ ನಿರ್ದೇಶನದ, ಕನ್ನಡದ ವರನಟ ಮುತ್ತುರಾಜ್, ಎಲ್ಲರ ಪ್ರೀತಿಯ ರಾಜಕುಮಾರ್ ಅವರ ಚೊಚ್ಚಲ ಚಿತ್ರ ಬೇಡರ ಕಣ್ಣಪ್ಪದಲ್ಲಿ ನಾಯಕಿಯಾಗಿ ಅಭಿನಯಿಸಿ ಚಿತ್ರ ಯಶಸ್ವಿಯಾದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
ಆಗೆಲ್ಲಾ ದಕ್ಷಿಣ ಭಾರತದ ಬಹುತೇಕ ಸಿನಿಮಾಗಳು ತಮಿಳುನಾಡಿನ ಮದರಾಸಿನಲ್ಲೇ ಚಿತ್ರೀಕರಣವಾಗುತ್ತಿದ್ದ ಕಾರಣ, ಬಹುತೇಕ ದಕ್ಷಿಣ ಭಾರತದ ಚಿತ್ರರಂಗದ ಕಲಾವಿದರು ಮದರಾಸಿನಲ್ಲೇ ವಾಸ್ತವ್ಯ ಹೂಡಿರುತ್ತಿದ್ದರು. ಬೇಡರ ಕಣ್ಣಪ್ಪ ಚಿತ್ರದಲ್ಲಿನ ಅಭಿನಯ ನೋಡಿ, ತಮಿಳಿನ ಮೇರುನಟ ಶಿವಾಜಿ ಗಣೇಶನ್ ಅವರ ಮೊದಲ ಚಿತ್ರದಲ್ಲಿಯೂ ಸಹಾ ಪಂಡರೀಬಾಯಿ ಅವರೇ ನಾಯಕಿಯಾಗಿ, ಎರಡೆರಡು ಸುಪ್ರಸಿದ್ಧ ನಾಯಕರ ಚೊಚ್ಚಲು ಚಿತ್ರಕ್ಕೆ ಪಂಡರೀಭಾಯಿಯವರು ನಾಯಕಿಯಾಗಿದ್ದು ಗಮನಾರ್ಹವಾಗಿದೆ. ನಂತರ ಸಾಲು ಸಾಲಾಗಿ ಸೋದರಿ, ಹರಿಭಕ್ತ, ರಾಯರ ಸೊಸೆ, ಬಂಗಾರದ ಹೂವು, ಜೇನುಗೂಡು ಮುಂತಾದ ಚಿತ್ರಗಳಲ್ಲಿ ಪಂಡರೀಬಾಯಿ ಅವರು ಅಭಿನಯಿಸಿ ಚಿತ್ರರಸಿಕರ ಮನಸ್ಸನ್ನು ಸೂರೆಗೊಂಡಿದ್ದಲ್ಲದೇ, ಅವರ ತಂಗಿಯಾದ ಮೈನಾವತಿಯನ್ನೂ ಸಹಾ ಚಿತ್ರರಂಗಕ್ಕೆ ನಾಯಕಿಯಾಗಿ ಕರೆತಂದು ಆಕೆಯೂ ಕೂಡ ಅನೇಕ ಯಶಸ್ವಿ ಚಿತ್ರಗಳ ಭಾಗವಾಗುತ್ತಾರೆ.
ಒಂದರ ಮೇಲೊಂದು ಸಿನಿಮಾಗಳು ಯಶಸ್ವಿಯಾದಂತೆಲ್ಲಾ ಕೈ ತುಂಬಾ ಕೆಲಸ ಮತ್ತು ಹಣ ಸೇರತೊಡಗಿದಂತೆ ಅವರ ಇಡೀ ಕುಟುಂಬದ ನಿರ್ವಹಣೆ ಪಂಡರೀಬಾಯಿಯವರ ಮೇಲೆ ಬೀಳತ್ತದೆ. ಅದೇ ಸಮಯದಲ್ಲೇ ಮದರಾಸಿನ ವಡಪಳನಿಯಲ್ಲೊಂದು ವಾಸಕ್ಕೆಂದು ಭವ್ಯವಾದ ಮನೆಯನ್ನು ಮಾಡಿದ್ದಲ್ಲದೇ, ಪಂಡಾರಪುರದ ಪಾಂಡುರಂಗನ ಭಕ್ತೆಯಾಗಿದ್ದ ಕಾರಣ ತಮ್ಮ ಮನೆಯ ಅಂಗಳದಲ್ಲೇ ತಮ್ಮ ಆರಾಧ್ಯ ದೈವ ಪಾಂಡುರಂಗನ ದೇವಸ್ಥಾನವನ್ನು ಕಟ್ಟಿಸುತ್ತಾರೆ. ನಮ್ಮ ಮಕ್ಕಳು ಚಿತ್ರದಲ್ಲಿ ಆ ಪುಟ್ಟ ಮಕ್ಕಳ ತಾಯಿಯಾಗಿ ನಿನ್ನೋಲುಮೆ ನಮಗಿರಲಿ ತಂದೆ ಎಂದು ತನ್ನ ಕುಟುಂಬದ ಹಿತಕ್ಕಾಗಿ ದೇವರನ್ನು ಬೇಡಿಕೊಳ್ಳುವ ಹಾಡಿನಲ್ಲಿ ಮೂಡಿಸುವ ಅವರ ತನ್ಮಯತೆ ಕನ್ನಡಿಗರ ಹೃದಯವನ್ನು ಮೀಟಿತ್ತು. ಇನ್ನು ರಾಜ ಕುಮಾರ್, ಎಂ. ಪಿ. ಶಂಕರ, ನರಸಿಂಹರಾಜು ಅಂತಹ ಮೇರು ನಟರುಗಳ ಜೊತೆ ಅಭಿನಯಿಸಿದ ಸತ್ಯಹರಿಶ್ಚಂದ್ರ ಚಿತ್ರದಲ್ಲಿ ತನ್ನ ಮಗ ಲೋಹಿತಾಶ್ವನನ್ನು ಕಳೆದುಕೊಂಡು ಆತನ ಅಂತ್ಯ ಸಂಸ್ಕಾರಕ್ಕೆ ತನ್ನ ಪತಿಯೇ ಅವಕಾಶ ನೀಡದೇ ಹೋದ ಸಂದರ್ಭದಲ್ಲಿ ಆಕೆಯ ಅಭಿನಯವಂತೂ ಅತ್ಯಂತ ಮನೋಜ್ಞವಾಗಿ ಕನ್ನಡಿಗರ ಮನೆ ಮಾತಾಗುತ್ತಾರೆ
ನಾಯಕಿಯಾಗಿ ಯಶಸ್ವಿಯಾದ ನಂತರ 1957ರಲ್ಲಿ ಚಿತ್ರ ನಿರ್ಮಾಪಕರಾಗಿ ಬಡ್ತಿ ಪಡೆದ ಪಂಡರೀಬಾಯಿ, ರಾಯರ ಸೊಸೆ ಎಂಬ ಸಿನಿಮಾವನ್ನು ಕನ್ನಡ ಮತ್ತು ತಮಿಳಿನಲ್ಲಿ ಏಕ ಕಾಲದಲ್ಲಿಯೇ ನಿರ್ಮಿಸಿ ಅದು ಗಲ್ಲಾ ಪೆಟ್ಟಿಗೆಯಲ್ಲಿ ಇನ್ನಿಲ್ಲದಂತೆ ಸೋತು ಹೋದ ನಂತರ ಅನುರಾಧ ಎಂಬ ಮತ್ತೊಂದು ಸಿನಿಮಾವನ್ನು ನಿರ್ಮಾಣ ಮಾಡಿ ಅದೂ ಸಹಾ ಯಶಸ್ವಿಯಾಗದೇ, ಕೈಯ್ಯಲ್ಲಿದ್ಖ ಹಣವನ್ನೆಲ್ಲಾ ಕಳೆದುಕೊಂಡು ಜೀವನದ ನಿರ್ವಹಣೆಗೆ ತೊಂದರೆ ಆದಾಗ, ಶ್ರೀ ಕೃಷ್ಣ ಚೈತನ್ಯ ಸಭಾ ಎಂಬ ನಾಟಕ ಮಂಡಳಿಯನ್ನು ಕಟ್ಟಿ ಕೊಂಡು ಊರೂರು ಸುತ್ತುತ್ತಾ ನಾಟಕ ಪ್ರದರ್ಶನಗಳನ್ನು ನೀಡಿ, ಸಿನಿಮಾ ನಿರ್ಮಾಣದಲ್ಲಿ ಕಳೆದುಕೊಂಡ ಹಣವನ್ನು ತಕ್ಕ ಮಟ್ಟಿಗೆ ಮರಳಿ ಪಡೆಯಲು ಯಶಸ್ವಿಯಾಗುತ್ತಾರೆ.
ಮುಖದಮೇಲೆ ಸ್ವಲ್ಪ ಸುಕ್ಕು ಕಾಣತೊಡಗಿದಂತೇ 50-60ರ ದಶಕದಲ್ಲೇ ಪಂಡರಿಬಾಯಿ ಅವರು ತಮಗಿಂತ ಹಿರಿಯ ನಟರಾಗಿದ್ದ ಎಂ ಜಿ ರಾಮಚಂದ್ರನ್, ಎನ್ ಟಿ ರಾಮರಾವ್ , ಶಿವಾಜಿಗಣೇಶನ್, ಡಾ.ರಾಜ್ ಕುಮಾರ್, ಅಕ್ಕಿನೇನಿ ನಾಗೇಶ್ವರರಾವ್, ರಾಜೇಶ್ ಖನ್ನ, ರಜನಿಕಾಂತ್, ಶಿವಾಜಿ ಗಣೇಶನ್, ಎನ್. ಟಿ. ರಾಮರಾವ್, ಹೀಗೆ ಅವರ ಕಾಲದ ನಾಯಕನಟರಿಗೆ ಮತ್ತು ಮುಂದಿನ ತಲೆಮಾರಿನ ನಟರುಗಳಿಗೆ ತಾಯಿ ಪಾತ್ರ ಮಾಡುವ ಮೂಲಕ ನಾಯಕಿಯಿಂದ ಪೋಷಕ ಪಾತ್ರವನ್ನು ಮಾಡಲಾರಂಭಿಸಿದರು. ವಯಸ್ಸಾಗುತ್ತಾ ಹೋದಂತೆಲ್ಲಾ ಪಂಡರಿಬಾಯಿ ಅವರಿಗೆ ಅವಕಾಶಗಳು ಕಡಿಮೆಯಾಗುತ್ತಾ ಹೋಯಿತು. ಅದದೇ ಸಮಯದಲ್ಲೇ ಅವರ ಒಡಹುಟ್ಟಿದವರು ಒಬ್ಬೊಬ್ಬರಾಗಿ ತಮ್ಮ ಸ್ವತಂತ್ರವಾಗಿ ತಮ್ಮ ಬದುಕನ್ನು ಕಟ್ಟಿ ಕೊಳ್ಳಲು ಮುಂದಾದಾಗ, ಪಂಡರೀಬಾಯಿಯವರು ಮನೆಯಲ್ಲೇ ಒಬ್ಬಂಟಿಯಾಗಿ ಹೆಚ್ಚು ಸಮಯವನ್ನು ಕಳೆಯಲು ಅಸಾಧ್ಯವಾದಾಗ ಅವರಿಗೊಬ್ಬ ಸಂಗಾತಿಯ ಅವಶ್ಯಕತೆ ಬೇಕೆಂದೆನಿಸಿದಾಗ, ತಮ್ಮ 50ನೇ ವಯಸ್ಸಿನಲ್ಲಿ ಡಾ.ಪಿ.ಎಚ್. ರಾಮಾರಾವ್ ಎಂಬುವರೊಂದಿಗೆ ಮದುವೆ ಮಾಡಿಕೊಂಡರು. ಅದಾಗಲೇ ವಯಸ್ಸಾಗಿದ್ದ ಕಾರಣ ಆ ದಂಪತಿಗೆ ಮಕ್ಕಳಿರಲಿಲ್ಲ. ಸಿನಿಮಾದಲ್ಲಿ ಅವಕಾಶಗಳೂ ಕ್ರಮೇಣ ಇಲ್ಲದೇ ಹೋಗಿ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವ ಸಮಯದಲ್ಲೇ, ಬರಗಾಲದಲ್ಲಿ ಅಧಿಕಮಾಸ ಎನ್ನುವಂತೆ ಮದ್ರಾಸಿನಿಂದ ಬೆಂಗಳೂರಿಗೆ ಬರುವ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಅವರು ಒಂದು ಕೈಯನ್ನು ಕಳೆದುಕೊಳ್ಳಬೇಕಾಗಿದ್ದಲ್ಲದೇ ಅವರ ಆರೋಗ್ಯವೂ ಹದಗೆಡಗತೊಡಗುತ್ತದೆ.
ಅದುವರೆಗೂ ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಸರಿ ಸುಮಾರು 1,500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರೂ ಈ ರೀತಿಯಾಗಿ ಅಸಹಾಯಕತೆಯ ಪರಿಸ್ಥಿತಿಗೆ ತಲುಪಿದಾಗ, ಕನ್ನಡ ಚಿತ್ರರಂಗದ ಅನೇಕರು ಅವರಿಗೆ ತಮ್ಮ ಚಿತ್ರಗಳಲ್ಲಿ ಪಾತ್ರಗಳನ್ನು ನೀಡುವ ಮೂಲಕ ಅವರಿಗೆ ಗೌರವಪೂರಿತ ಸಹಾನುಭೂತಿ ಸೂಚಿಸಿದ್ದು, ಅವರ ಕಷ್ಟ ಮತ್ತು ನೋವನ್ನು ಸ್ವಲ್ಪ ಮಟ್ಟಿಗೆ ಮರೆಯುವಂತೆ ಮಾಡಿತ್ತದೆ. ಅವರ ತಂಗಿ ಮೈನಾವತಿ ಅವರು ನಿರ್ಮಿಸಿದ್ದ ಅಮ್ಮ ಮತ್ತು ಮನೆತನ ಎಂಬ ದೂರದರ್ಶನದ ಧಾರವಾಹಿಗಳಲ್ಲಿಯೂ ಸಹಾ ಪಂಡರೀಬಾಯಿ ಕಾಣಿಸಿಕೊಂಡಿದ್ದರು. ರಾಜಕುಮಾರ್ ಅವರು ತಮ್ಮ ಅನುರಾಗ ಸಂಗಮ ಚಿತ್ರದಲ್ಲಿ ಅವರ ತಾಯಿಯ ಪಾತ್ರವನ್ನು ನೀಡಿದ್ದಲ್ಲದೇ ಶ್ರೀಕಂಠಾ.. ವಿಷಕಂಠಾ.. ಎಂಬ ಹಾಡಿನಲ್ಲಿ ನಂಜನಗೂಡಿನ ನಂಜುಡೇಶ್ವರನ ಸನ್ನಿಧಿಯಲ್ಲಿ ತಮ್ಮ ತಾಯಿ ಪಾತ್ರಧಾರಿಯಾಗಿದ್ದ (ಅದಾಗಲೇ ಒಂದು ಕೈ ಮುರಿದಿತ್ತು) ಪಂಡರೀಬಾಯಿಯರನ್ನು ಹೊತ್ತು ತಿರುಗುವ ಸನ್ನಿವೇಷ ಹೃದಯ ಕಿತ್ತು ಬರುವಂತಿತ್ತು ಎಂದರೂ ತಪ್ಪಾಗದು.
ಅಷ್ಟೆಲ್ಲಾ ಜನರ ಸಹಕಾರವಿದ್ದರೂ ಅಪಘಾತದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಪಂಡರಿಬಾಯಿ ಅವರ ಆರೋಗ್ಯ ದಿನೇ ದಿನೇ ಹದಗೆಡತೊಡಗಿದ್ದಲ್ಲದೇ, ಮನೆಯ ಆರ್ಥಿಕ ಪರಿಸ್ಥಿತಿಯೂ ಕಷ್ಟಕರವಾದಾಗ, ಕರ್ನಾಟಕದ ಮೂಲದ ನಟಿಯಾಗಿ ನಂತರ ಆ ಸಮಯದಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಆವರು ಸಹಾ ತಮ್ಮ ಟ್ರಸ್ಟ್ ನಿಂದ ಆರ್ಥಿಕ ನೆರವು ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೇ, 2003ರ ಜನವರಿ 29ರಂದು ಪಂಡರಿಬಾಯಿ ಅವರು ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸುತ್ತಾರೆ.. ಪಂಡರೀಬಾಯಿಯವರ ನಿಧನನದ ನಂತರ ಅವರ ಆಸೆಯಂತೆಯೇ ಅವರ ವಡಪಳನಿಯಲ್ಲಿದ್ದ ಜಾಗ ಮತ್ತು ಪಾಂಡುರಂಗ ದೇವಸ್ಥಾನವನ್ನು ಉಡುಪಿಯ ಪೇಜಾವರ ಮಠಕ್ಕೆ ಅವರ ಪತಿಯವರು ಹಸ್ತಾಂತರಿಸುವ ಮೂಲಕ ತಮ್ಮ ಧರ್ಮಪತ್ನಿಯವರ ಅಂತಿಮ ಆಸೆಯನ್ನು ಪೂರೈಸುತ್ತಾರೆ.
ತಾಯಿಗಿಂತ ದೇವರಿಲ್ಲ ಎಂಬ ಗಾದೆಯನ್ನು ಕೇಳಿದ್ದೇವೆ. ಹಾಗೆಯೇ ಜಗತ್ತಿನಲ್ಲಿ ಎಂದಿಗೂ ಕೆಟ್ಟ ತಾಯಿ ಇರುವುದಿಲ್ಲ. ಆಕೆ ಕರುಣಾಮಯಿ, ಸ್ನೇಹಜೀವಿ, ಕ್ಷಮಯಾಧರಿತ್ರಿಯಾಗಿರುತ್ತಾಳೆ. ಈ ಎಲ್ಲಾ ಗುಣ ಲಕ್ಷಣಗಳನ್ನು ಸಿನಿಮಾದ ತೆರೆಯ ಮೇಲೂ ಮತ್ತು ನಿಜ ಜೀವನದಲ್ಲೂ ಹೊಂದಿದ್ದ, ಕನ್ನಡದ ಮೇರು ನಟ ರಾಜಕುಮಾರಿಂದಲೇ ಚಿತ್ರರಂಗದಲ್ಲಿ ಪಂಡರೀಬಾಯಿ ಅಂತಹವರು ಸಿಗುವುದು ಸಾಧ್ಯವೇ ಇಲ್ಲ ಎಂದು ಹೊಗಳಿಸಿಕೊಂಡಿದ್ದ, ಸಿನಿಮಾಗಳಲ್ಲಿ ತಾಯಿ ಎಂದ ಕೂಡಲೇ ಥಟ್ ಅಂತಾ ಕಣ್ಣ ಮುಂದೆ ಬರುವ ಕನ್ನಡ ಚಿತ್ರರಂಗದ ಅಮ್ಮ ಪಂಡರೀಬಾಯಿ ನಿಜಕ್ಕೂ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ